ADVERTISEMENT

ಕನ್ನಡದಲ್ಲಿ ಪೂರ್ಣಾಂಕ: ಕಸಾಪ ಪುರಸ್ಕಾರ

ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 14:26 IST
Last Updated 10 ಆಗಸ್ಟ್ 2024, 14:26 IST
ಕನ್ನಡದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಮಧುಗಿರಿಯಲ್ಲಿ ಕಸಾಪದಿಂದ ಸತ್ಕರಿಸಲಾಯಿತು
ಕನ್ನಡದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಮಧುಗಿರಿಯಲ್ಲಿ ಕಸಾಪದಿಂದ ಸತ್ಕರಿಸಲಾಯಿತು    

ಮಧುಗಿರಿ: ಕನ್ನಡ ತಾಯಿ ಬಾಷೆಯಾಗಿದ್ದು, ಎಲ್ಲರೂ ಕನ್ನಡಕ್ಕೆ ಆಧ್ಯತೆ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕಸಾಪ ಮತ್ತು ತಾಲ್ಲೂಕು ಪದವೀಧರರ ವೇದಿಕೆಯಿಂದ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಕನ್ನಡ ಬಾಷೆಯಲ್ಲಿ ಶೇಖಡ ನೂರರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಬಾಷೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕು. ಯುವ ಪೀಳಿಗೆ ಮಹಾತ್ಮ ಗಾಂಧೀಜಿ ಅವರನ್ನು ಮರೆಯುತ್ತಿದ್ದಾರೆ. ದೇಶದ ಬಗ್ಗೆ ಅಭಿಮಾನ ಬರಬೇಕು. ದೇಶಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಬೇಕು. ಮಹಾತ್ಮಗಾಂಧಿ, ಜವಹಾರ್‌ಲಾಲ್ ನೆಹರೂ ದೇಶಕ್ಕೆ ಪ್ರಜಾತಂತ್ರವನ್ನು ತಂದುಕೊಟ್ಟವರು. ನೆಹರೂ ಕೈಗಾರಿಕೆಗಳು, ಪಂಚವಾರ್ಷಿಕ ಯೋಜನೆಗಳ ರುವಾರಿ. ಹಲವು ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಆಲಮಟ್ಟಿ ಯೋಜನೆಗೆ ತಳಪಾಯ ಹಾಕಿದವರು ಎಂದು ಸ್ಮರಿಸಿದರು.

ADVERTISEMENT

ತಾಲ್ಲೂಕಿನ ಶಶಿಕುಮಾರ್ ಅವರು ಐಎಫ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರಂತೆ ಪ್ರತಿಯೊಬ್ಬರೂ ಯಶಸ್ಸು ಗಳಿಸಬೇಕು. ವಿದ್ಯಾರ್ಥಿಗಳನ್ನು ಗುರುತಿಸಿ ಸಮಾಜಕ್ಕೆ ಆಸ್ತಿಯನ್ನಾಗಿ ಬದಲಾಯಿಸುವ ಪುಣ್ಯದ ಕೆಲಸ ಶಿಕ್ಷಕರ ಮೇಲಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಮುನೀಂದ್ರ ಕುಮಾರ್ ಮಾತನಾಡಿ, ಯಶಸ್ಸನ್ನು ಯಾರೂ ಬೊಗಸೆಯಲ್ಲಿ ತಂದು ಹಾಕುವುದಿಲ್ಲ. ಶ್ರಮ ವಹಿಸಿದಾಗ ಮಾತ್ರ ಅದು ಸಿಗಲಿದೆ ಎಂದರು.

ಐಎಫ್ಎಸ್ ಅಧಿಕಾರಿ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಅಭ್ಯಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದ ಬಗ್ಗೆ ಧೈರ್ಯಗೆಡಬಾರದು. ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತಿನಂತೆ ನಿರಂತರ ಅಭ್ಯಾಸದಿಂದ ಯಶಸ್ಸು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಸಾಹಿತಿ ಮಲನ ಮೂರ್ತಿ, ಬಿಇಒ ಕೆ.ಎನ್. ಹನುಮಂತರಾಯಪ್ಪ, ಡಿವೈಎಸ್‌ಪಿ ರಾಮಚಂದ್ರಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ. ಸಿದ್ದೇಶ್ವರ, ಕಸಾಪ ತಾಲ್ಲೂಕು ಅಧ್ಯಕ್ಷೆ ಸಹನಾ ನಾಗೇಶ್, ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.