ADVERTISEMENT

ಕೊರಟಗೆರೆ | ‘ಪರಮೇಶ್ವರಗೆ ಮಾದಿಗ ಸಮುದಾಯದ ಬೆಂಬಲ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:09 IST
Last Updated 19 ಮಾರ್ಚ್ 2023, 8:09 IST

ಕೊರಟಗೆರೆ: ‘ಕೊರಟಗೆರೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಡಾ.ಜಿ. ಪರಮೇಶ್ವರ ಅವರಂತಹ ಸಜ್ಜನ ರಾಜಕಾರಣಿಯ ಅಗತ್ಯತೆ ಹೆಚ್ಚಾಗಿದೆ. ಕ್ಷೇತ್ರದ ಮಾದಿಗ ಸಮುದಾಯ ಈ ಬಾರಿಯೂ ಅವರನ್ನೇ ಬೆಂಬಲಿಸಲಿದೆ’ ಎಂದು ದಲಿತ ಮುಖಂಡ ವಾಲೆ ಚಂದ್ರಯ್ಯ ಹೇಳಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾದಿಗ ಸಮುದಾಯದ ಮುಖಂಡನಾದ ನಾನು 2008ರಲ್ಲಿ ಪರಮೇಶ್ವರ ವಿರುದ್ಧ ಜೆಡಿಎಸ್‌ನಿಂದ ಎದುರಾಳಿಯಾಗಿ ಸ್ಪರ್ಧಿಸಿದ್ದೆ. ಆಗ ಕ್ಷೇತ್ರದ ಮಾದಿಗ ಸಮುದಾಯ ನನಗೆ ಮತ ನೀಡದೆ ಪರಮೇಶ್ವರ ಅವರನ್ನೇ ಆಯ್ಕೆ ಮಾಡಿದರು’ ಎಂದು ಹೇಳಿದರು.

ಮಾದಿಗ ಜನಾಂಗದ ಮುಖಂಡ ಚುನಾವಣೆಗೆ ಸ್ಪರ್ಧೆ ಮಾಡಿದರೂ ಪರಮೇಶ್ವರ ಅವರನ್ನು ಗೆಲ್ಲಿಸಿದರು. ಅಂದರೆ ಮಾದಿಗ ಜನಾಂಗದ ಒಲವು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ ಪರಮೇಶ್ವರ ಅವರ ಕಡೆಗೆ ಇದೆ ಎಂಬುದನ್ನು ತಿಳಿಸುತ್ತದೆ. ಈ ಬಾರಿಯೂ ಕ್ಷೇತ್ರದಲ್ಲಿ ಸಮುದಾಯವು ಪರಮೇಶ್ವರ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮವಹಿಸಲಿದೆ ಎಂದು ತಿಳಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎನ್. ನಂದೀಶ್ ಮಾತನಾಡಿ, ‘ನಮ್ಮಲ್ಲಿ ಎಡ, ಬಲ ಎಂಬ ಭೇದಬಾವ ಇಲ್ಲ. ಪರಮೇಶ್ವರ ಕ್ಷೇತ್ರಕ್ಕೆ ಬಂದಾಗಿನಿಂದಲೂ ಮಾದಿಗ ಜನಾಂಗ ಅವರನ್ನು ಬೆಂಬಲಿಸಿದೆ. ಅದೇ ರೀತಿ ನಮ್ಮ ಸಮುದಾಯದ ಯಾರೇ ವ್ಯಕ್ತಿ ಸ್ಪರ್ಧಿಸಿದರೂ ನಿರ್ಣಾಯಕ ಮತದಾರರಾದ ಮಾದಿಗ ಸಮುದಾಯ ಪರಮೇಶ್ವರ ಪರ ನಿಲ್ಲಲಿದೆ’ ಎಂದು ಹೇಳಿದರು.

ಮುಖಂಡ ಚಿಕ್ಕರಂಗಯ್ಯ ಮಾತನಾಡಿ, ಪರಮೇಶ್ವರ ಅವರು ಕ್ಷೇತ್ರದಲ್ಲಿ ಗೆದ್ದ ನಂತರ ಜನಾಂಗಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ಸಮುದಾಯದ ಪರವಾಗಿ ಅವರು ನಿಂತಿದ್ದಾರೆ. ಒಟ್ಟಾಗಿ ಈ ಬಾರಿಯೂ ಅವರ ಗೆಲುವಿಗೆ ನಮ್ಮ ಸಮುದಾಯ ಶ್ರಮಿಸಲಿದೆ ಎಂದು ಹೇಳಿದರು.

ಮುಂಡರಾದ ಬಿ.ಡಿ. ಪುರ ಸುರೇಶ್, ನರಸಿಂಹಮೂರ್ತಿ, ನಾಗರಾಜು ಮಾತನಾಡಿದರು. ರಾಘವೇಂದ್ರ, ಕೇಬಲ್ ಸಿದ್ದಲಿಂಗಪ್ಪ, ಗುಂಡನಪಾಳ್ಯ ನರಸಿಂಹಮೂರ್ತಿ, ಹೊಳವನಹಳ್ಳಿ ಜಯರಾಮ್, ಮೂರ್ತಣ್ಣ, ಗೋಪಿಕೃಷ್ಣ, ನಾಗೇಶ್, ನರಸಮ್ಮ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.