
ಮಾಗಡಿ: ಪಟ್ಟಣದ ಎನ್ಇಎಸ್ ಬಡಾವಣೆಯ ಕರಣೀಕರ ಕಲ್ಯಾಣಿ ಬಳಿ ಕಣ್ವಾನದಿಯ ಉಗಮ ಸ್ಥಳದಲ್ಲಿ ಒಳಚರಂಡಿಯ ಕಲುಷಿತ ಕೆರೆಯಂತೆ ನಿಂತು ಜಲಮಾಲಿನ್ಯ ಉಂಟಾಗಿದೆ ಎಂದು ನಿವೃತ್ತ ವಾಯುಸೇನೆ ಅಧಿಕಾರಿ ಶಿವಲಿಂಗಯ್ಯ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಚನ್ನಪ್ಪಬಡಾವಣೆ, ಕೋಟಪ್ಪನಪಾಳ್ಯ, ಎನ್ಇಎಸ್ ಬಡಾವಣೆ ಹಾಗೂ ಇತರೆಡೆಗಳಲ್ಲಿ ಒಳಚರಂಡಿಗಳ ಚೇಂಬರ್ ಒಡೆದು ಹೋಗಿವೆ. ರೇಷ್ಮೆ ಇಲಾಖೆಯ ಫಾರ್ಮ್ ಬಳಿ ಕಲುಷಿತ ನೀರು ಹರಿದು ಬರುತ್ತಿದೆ. ಕಣ್ವನದಿ ಉಗಮ ಸ್ಥಳದಲ್ಲಿನ ಸರ್ಕಾರಿ ಭೂಮಿಯಲ್ಲಿ ಕೆರೆಯಂತೆ ಸಂಗ್ರಹವಾಗಿದೆ. ತಿರುಮಲೆ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯವಿದೆ ಎಂದು ಆರೋಪಿಸಿದರು.
ಪಕ್ಕದಲ್ಲಿ ಎರಡು ಖಾಸಗಿ ಶಾಲೆ, ಅಂಗನವಾಡಿ ಕೇಂದ್ರವಿದೆ. ಶಾಲೆಗಳಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಪ್ರವಾಸಿ ಮಂದಿರ, ಕೃಷಿ ಇಲಾಖೆ ಕಚೇರಿ ಮತ್ತು ಎನ್ಇಎಸ್ ಮತ್ತು ನಟರಾಜ ಬಡಾವಣೆ ನಿವಾಸಿಗಳಿಗೆ ಒಂಚರಂಡಿ ಕಲುಷಿತ ಸಂಗ್ರಹವಾಗಿರುವುದರಿಂದ ದುರ್ನಾತ ಬೀರುತ್ತಿದೆ. ಹಗಲಿನಲ್ಲಿಯೇ ಸೊಳ್ಳೆ, ಇಲಿ, ಹೆಗ್ಗಣ ಮನೆಗೆ ನುಗ್ಗುತ್ತಿವೆ. ಪುರಸಭೆ ಅಧಿಕಾರಿಗಳು ಒಳಚರಂಡಿ ದುರಸ್ತಿ ಪಡಿಸಬೇಕು. ಜಲಮೂಲದ ರಕ್ಷಣಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.