ತುಮಕೂರು: ಕಾರು ಖರೀದಿಸಲು ಶನಿವಾರ ನಗರದ ಷೊ ರೂಂ ಒಂದಕ್ಕೆ ಬಂದಿದ್ದ ಯುವಕನ ವೇಷ ಭೂಷಣ ನೋಡಿ ‘ನಿನ್ನಿಂದ ₹10 ಕೊಡೋಕೆ ಆಗಲ್ಲ. ನೀನು ಕಾರು ಖರೀದಿಸುತ್ತೀಯಾ?’ ಎಂದು ಅವಮಾನಿಸಿ, ಹೊರಕಳಿಸಿದ್ದ ಷೊ ರೂಂ ಸಿಬ್ಬಂದಿ ಯುವಕನ ಕ್ಷಮೆಯಾಚಿಸಿದ್ದಾರೆ.
ಹೆಬ್ಬೂರು ಹೋಬಳಿಯ ರಾಮನಪಾಳ್ಯದ ನಿವಾಸಿ ಕೆಂಪೇಗೌಡ ಕಾರು ಖರೀದಿಸಲು ನಗರದಲ್ಲಿರುವ ಷೊ ರೂಂಗೆ ಭೇಟಿ ನೀಡಿದ್ದರು. ಅವರ ಬಟ್ಟೆ ಮತ್ತು ಜತೆಗಿರುವ ಸ್ನೇಹಿತರನ್ನು ನೋಡಿ ಅಲ್ಲಿನ ಸಿಬ್ಬಂದಿ ’ನಿನಗೆ ₹10 ನೀಡುವ ಯೋಗ್ಯತೆಯಿಲ್ಲ’ ಎಂದು ಹೀಯಾಳಿಸಿದ್ದರು. ‘₹10 ಲಕ್ಷ ತಂದರೆ ಕಾರು ಕೊಡುತ್ತೇವೆ‘ ಎಂದು ಷೊ ರೂಂನಿಂದ ವಾಪಸ್ ಕಳುಹಿಸಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಯುವಕ, ಘಟನೆ ನಡೆದ ಅರ್ಧ ಗಂಟೆಯಲ್ಲಿ ₹10 ಲಕ್ಷ ಹಣ ಹೊಂದಿಸಿಕೊಂಡು ಹಿಂದಿರುಗಿದ್ದರು.
‘ದೊಡ್ಡ ಮೊತ್ತದ ನಗದು ಒಂದೇ ಬಾರಿ ಸ್ವೀಕರಿಸಲು ಸಾಧ್ಯವಿಲ್ಲ. ಈಗಾಗಲೇ ಆರ್ಟಿಒ ಕಚೇರಿ ಅವಧಿ ಮುಗಿದಿದ್ದರಿಂದ ಕಾರು ನೀಡಲು ಆಗುವುದಿಲ್ಲ’ ಎಂದು ಸಿಬ್ಬಂದಿ ತಿಳಿಸಿದ್ದರು. ಕೆಂಪೇಗೌಡ ತಮಗೆ ಅವಮಾನ ಮಾಡಿದ ಷೊ ರೂಂನಲ್ಲಿ ಕಾರು ಖರೀದಿಸದೇ ಸಿಬ್ಬಂದಿಯ ವರ್ತನೆಯನ್ನು ಖಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.