ADVERTISEMENT

ಮಾರ್ಕೋನಹಳ್ಳಿ ಜಲಾಶಯ: ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

ಇನ್ನಿಬ್ಬರಿಗಾಗಿ ಗುರುವಾರ ಮುಂದುವರಿಯಲಿದೆ ಶೋಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:39 IST
Last Updated 9 ಅಕ್ಟೋಬರ್ 2025, 2:39 IST
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ಮಾಗಡಿಪಾಳ್ಯದ ಸಾಜಿದಾ ಮನೆಗೆ ಭೇಟಿ ನೀಡಿದ ಶಾಸಕ ಡಾ.ರಂಗನಾಥ್ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ಮಾಗಡಿಪಾಳ್ಯದ ಸಾಜಿದಾ ಮನೆಗೆ ಭೇಟಿ ನೀಡಿದ ಶಾಸಕ ಡಾ.ರಂಗನಾಥ್ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು   

ಕುಣಿಗಲ್ (ತುಮಕೂರು): ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ ಬುಧವಾರ ಇಬ್ಬರ ಶವ ಪತ್ತೆಯಾಗಿವೆ. ಮತ್ತಿಬ್ಬರ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಎಷ್ಟೇ ಸಾಹಸಪಟ್ಟರೂ ಪ್ರಯೋಜನವಾಗಿಲ್ಲ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ನೇತೃತ್ವದ ತಂಡ ಬುಧವಾರ ಸಂಜೆವರೆಗೂ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದು ನಿಫ್ರಾ (4) ಮತ್ತು ಶಬನಾ (44) ಎಂಬುವರ ಶವಗಳು ಪತ್ತೆಯಾಗಿವೆ. ಮೋಹಿಬ್‌ (11) ಮತ್ತು ತಬಸ್ಸಮ್ (46) ಇನ್ನೂ ಪತ್ತೆಯಾಗಿಲ್ಲ.

ಮಾರ್ಕೋನಹಳ್ಳಿ ಜಲಾಶಯಕ್ಕೆ ವಿಹಾರಕ್ಕೆ ಹೋಗಿದ್ದ ಕುಟುಂಬದ ಸದಸ್ಯರು ಬೆಟ್ಟಗೊಂಡನಹಳ್ಳಿ ಕಾಲುವೆಯಲ್ಲಿ ನೀರಿಗೆ ಇಳಿದಿದ್ದರು. ಹತ್ತು ಮಂದಿ ಕೊಚ್ಚಿಕೊಂಡು ಹೋಗಿದ್ದರು. ಆ ಪೈಕಿ ಮೂವರು ಪಾರಾಗಿದ್ದರು. ಇಬ್ಬರ ಶವ ಮಂಗಳವಾರ ಪತ್ತೆಯಾಗಿದ್ದವು. ನಾಲ್ವರು ಕಾಣೆಯಾಗಿದ್ದರು. ಕತ್ತಲಾಗಿದ್ದರಿಂದ ಶೋಧ ಕಾರ್ಯ ನಿಲ್ಲಿಸಲಾಗಿತ್ತು.

ADVERTISEMENT

ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆರು ಜನರ ಪೈಕಿ ನಾಲ್ವರ ಶವ ಸಿಕ್ಕಿದ್ದು, ಇನ್ನೂ ಇಬ್ಬರು ಪತ್ತೆಯಾಗಿಲ್ಲ. ಅವರು ಬದುಕುಳಿದಿರುವ ಸಾಧ್ಯತೆ ಕ್ಷೀಣ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಗುರುವಾರ ಮುಂಜಾನೆ ಮತ್ತೆ ಶೋಧ ಕಾರ್ಯ ಮುಂದುವರೆಯಲಿದೆ.

ದುರಂತ ನಡೆದ ಮಾರ್ಕೋನಹಳ್ಳಿ ಜಲಾಶಯಕ್ಕೆ ಶಾಸಕ ಡಾ.ರಂಗನಾಥ್ ಬುಧವಾರ ಭೇಟಿ ನೀಡಿ ಪರಶೀಲಿಸಿದರು. ‘ಜಲಾಶಯ ವ್ಯಾಪ್ತಿಯಲ್ಲಿ ಎಚ್ಚರಿಕೆಯ ಫಲಕ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

ನಂತರ ತಾಲ್ಲೂಕಿನ ಮಾಗಡಿಪಾಳ್ಯದ ಮೃತ ವ್ಯಕ್ತಿ ಸಾಜಿದಾ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ₹1 ಲಕ್ಷ ಪರಿಹಾರಧನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.