ADVERTISEMENT

ಮತಕ್ಕಾಗಿ ಮೇಕೆದಾಟು ಪಾದಯಾತ್ರೆ: ಜೆಸಿಎಂ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:59 IST
Last Updated 6 ಜನವರಿ 2022, 3:59 IST
ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಐಸಿಯು ಘಟಕಕ್ಕೆ ಉಚಿತ ಹಾಸಿಗೆ, ಮಂಚ ನೀಡಿದ ಹಿರಿಯ ನಟಿ ಬಿ.ಜಯಶ್ರೀ. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಇದ್ದರು
ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಐಸಿಯು ಘಟಕಕ್ಕೆ ಉಚಿತ ಹಾಸಿಗೆ, ಮಂಚ ನೀಡಿದ ಹಿರಿಯ ನಟಿ ಬಿ.ಜಯಶ್ರೀ. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಇದ್ದರು   

ಗುಬ್ಬಿ: ಜಿಲ್ಲೆಯಲ್ಲಿ ಶೇ 0.5ರಷ್ಟು ಮಾತ್ರ ಕೋವಿಡ್‌ ಸೋಂಕು ಕಂಡುಬಂದಿದ್ದು, ಎಲ್ಲ ಆಸ್ಪತ್ರೆಗಳಿಗೂ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಹಿರಿಯ ನಟಿ ಬಿ.ಜಯಶ್ರೀ ಮಾಲತಮ್ಮ ಆರ್ಟ್ ಆಪ್ ಪೌಂಡೇಶನ್‌ನಿಂದ ಕೋವಿಡ್ ತೀವ್ರನಿಗಾ ಘಟಕಕ್ಕೆ 10 ಹಾಸಿಗೆ, ದಿಂಬು ಸಹಿತ ಮಂಚ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಕೇವಲ ರಾಜಕೀಯ ಉದ್ದೇಶಕ್ಕಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಸುಮಾರು 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಈ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ಕ್ಷೀಣಿಸುತ್ತಿದೆ ಎಂದುಕೊಂಡು ಕಾಂಗ್ರೆಸ್‌ ರಾಜಕೀಯ ಮಾಡಲು ಹೊರಟಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಈ ಯೋಜನೆ ಬೇಡ ಎಂದಿಲ್ಲ. ತಾಂತ್ರಿಕ ಕಾರಣಗಳಿಂದ ಯೋಜನೆ ತಡವಾಗುತ್ತಿದೆ ಎಂದು ತಿಳಿದಿದ್ದರೂ, ಕೇವಲ ಮತ ಪಡೆಯುವುದಕ್ಕೆ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.

ADVERTISEMENT

ಕಾಂಗ್ರೆಸ್ ನವರು ಈ ಹಿಂದೆ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದರಿಂದಲೇ ಅಧಿಕಾರ ಪಡೆದುಕೊಂಡೆವು ಎಂಬ ಭ್ರಮೆಯಲ್ಲಿದ್ದಾರೆ. ಮಂಡ್ಯ ಮೈಸೂರು ಜನರು ಬುದ್ದಿವಂತರು ಎನ್ನುವುದು ಅವರಿಗೆ ಗೊತ್ತಿಲ್ಲ. ಇಂತಹ ಪಾದಯಾತ್ರೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ರಂಗ ಕಲಾವಿದೆ ಬಿ ಜಯಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಉಪ ವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ತಹಶೀಲ್ದಾರ್ ಬಿ.ಆರತಿ, ತಾಲ್ಲೂಕು ಅರೋಗ್ಯ ಅಧಿಕಾರಿ ಡಾ.ಬಿಂದು ಮಾಧವ, ಮುಖ್ಯ ವೈದ್ಯಾಧಿಕಾರಿ ಡಾ. ದಿವಾಕರ್, ಗ್ರಾಮ ಪಂಚಾಯತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯರಾದ ಆನಂದ್, ರಾಜೇಶ್, ಬಗರ್ ಹುಕ್ಕುಂ ಸಮಿತಿ ಸದಸ್ಯ ಚಂದ್ರಮೌಳಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.