ADVERTISEMENT

18 ರೋಗಿಗಳಿಗೆ ₹ 3 ಲಕ್ಷ ನೆರವು

ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಜನತಾ ದರ್ಶನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 15:30 IST
Last Updated 15 ಅಕ್ಟೋಬರ್ 2018, 15:30 IST
ಗ್ರಾಮಾಂತರ ಕ್ಷೇತ್ರದ ಜನರಿಂದ ಶಾಸಕ ಡಿ.ಸಿ.ಗೌರಿಶಂಕರ್ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿದರು
ಗ್ರಾಮಾಂತರ ಕ್ಷೇತ್ರದ ಜನರಿಂದ ಶಾಸಕ ಡಿ.ಸಿ.ಗೌರಿಶಂಕರ್ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿದರು   

ತುಮಕೂರು: ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಸೋಮವಾರ ನಡೆಸಿದ ಜನತಾ ದರ್ಶನದಲ್ಲಿ ವಿವಿಧ ಅಹವಾಲುಗಳಿಗೆ ಸಂಬಂಧಿಸಿದಂತೆ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದವು. 18ಕ್ಕೂ ಹೆಚ್ಚು ರೋಗಿಗಳ ಚಿಕಿತ್ಸೆಗಾಗಿ ಸ್ಥಳದಲ್ಲೆ ₹ 3 ಲಕ್ಷ ಧನಸಹಾಯ ನೀಡಿದರು.

ಪಹಣಿ ತಿದ್ದುಪಡಿ, ದುರಸ್ತು, ಖಾತೆ ಬದಲಾವಣೆ, ಎಂ.ಆರ್ ತಿದ್ದುಪಡಿಗೆ ಸಂಬಂಧಿಸಿದಂತೆ ರೈತರು ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ನಿವೇಶನ ಹಂಚಿಕೆ, ಖಾತೆ ಬದಲಾವಣೆ, ಹೊಸ ನಿವೇಶನಕ್ಕೆ ಅರ್ಜಿಗಳು ಸಲ್ಲಿಕೆಯಾದವು.

ಪಶುಸಂಗೋಪನೆ, ಬೆಸ್ಕಾಂ, ಪೊಲೀಸ್, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ಮಾಸಾಶನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖಾವಾರು ಅರ್ಜಿಗಳನ್ನು ಜನರಿಂದ ಶಾಸಕರು ಸ್ವೀಕರಿಸಿದರು.‌

ADVERTISEMENT

ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ವಿವಿಧ ಇಲಾಖೆಯ ಅಧಿಕಾರಿಗಳ ಇದ್ದರು.

ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳ ಮೂಲಕ ಪರಿಹಾರ ಸೂಚಿಸಿದರು. ಗಂಭೀರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಮುಂದಿನ ಸೋಮವಾರದ ಒಳಗೆ ಸ್ವೀಕೃತಿಯಾಗಿರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದರು.

ಡಿ.ಸಿ.ಗೌರಿಶಂಕರ್ ಮಾತನಾಡಿ, ‘ಕಾರಣಾಂತರಗಳಿಂದ ಜನತಾ ದರ್ಶನವನ್ನು ಮುಂದೂಡಲಾಗಿತ್ತು. ಇನ್ನು ಮುಂದೆ ಪ್ರತಿ ಸೋಮವಾರ ಜನತಾ ದರ್ಶನ ‌‌ನಡೆಯಲಿದೆ. ಕ್ಷೇತ್ರದ ಜನರು ಸಮಸ್ಯೆಗಳನ್ನು ಖುದ್ದಾಗಿ ನನ್ನ ಗಮನಕ್ಕೆ ತರಬಹುದು. ಕಂದಾಯ, ವಿದ್ಯುತ್, ಪೊಲೀಸ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ರೈತರ, ಬಡವರ ಹಾಗೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಹೇಳಿದರು.

‘ಒಂದು ವೇಳೆ ಸ್ಪಂದಿಸದಿದ್ದರೆ ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್‌ಕುಮಾರ್, ಹೆಬ್ಬೂರು ಹೋಬಳಿ ಜೆಡಿಎಸ್ ಅಧ್ಯಕ್ಷ ವೈ.ಟಿ.ನಾಗರಾಜು, ಜಿ.ಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಪಾಲನೇತ್ರಯ್ಯ, ಹಿರೇಹಳ್ಳಿ ಮಹೇಶ್, ಹರಳೂರು ರುದ್ರೇಶ್, ಸುವರ್ಣಗಿರಿ ಕುಮಾರ್, ನರುಗನಹಳ್ಳಿ ಮಂಜುನಾಥ್, ಬೆಳಗುಂಬ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.