ADVERTISEMENT

ಮಾಸಿಕ ಶರಣ ಚಿಂತನಾ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 5:10 IST
Last Updated 1 ಅಕ್ಟೋಬರ್ 2021, 5:10 IST

ತುಮಕೂರು: ಬಸವಣ್ಣನವರ ವಚನಗಳಲ್ಲಿನ ಚಿಂತನೆಗಳು ಸರ್ವಸತ್ಯವಾಗಿವೆ. 900 ವರ್ಷಗಳು ಕಳೆದರೂ ಅವುಗಳು ನಿತ್ಯನೂತನವಾಗಿವೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಪರಂಜ್ಯೊತಿ ಸಂಯೋಗ ಸೇವಾ ಮಂಟಪದಿಂದ ಶಾಂತಿನಗರದಲ್ಲಿ ನಡೆದ 16ನೇ ಮಾಸಿಕ ಶರಣ ಚಿಂತನಾ ಗೋಷ್ಠಿಯಲ್ಲಿ ‘ಬಸವಣ್ಣನವರ ಚಿಂತನೆಗಳು’ ವಿಷಯವಾಗಿ ಮಾತನಾಡಿದರು.

ಜಾತಿ, ಮತ, ಧರ್ಮ, ಪಂಗಡ ಮೀರಿದ ಬಸವೇಶ್ವರರ ಚಿಂತನೆಗಳು ಪ್ರಸ್ತುತ ವಿಶ್ವಮಾನ್ಯವಾಗಿವೆ. ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಶಿವಾನಂದ್, ‘ಬಸವಣ್ಣ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಬಸವಣ್ಣ ಕೇವಲ ಕರ್ನಾಟಕದ ಆಸ್ತಿಯಲ್ಲ. ರಾಜ್ಯ, ರಾಷ್ಟ್ರ ಮೀರಿ ಬೆಳೆದ ಅಂತರರಾಷ್ಟ್ರೀಯ ವ್ಯಕ್ತಿಯಾಗಿ ಜಗತ್ತಿನೆಲ್ಲೆಡೆ ಪೂಜಾರ್ಹರಾಗಿದ್ದಾರೆ’ ಎಂದು ನುಡಿದರು.

ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ಧರಾಮಯ್ಯ, ‘ವಿಶ್ವ ಸಂತರ ಸಾಲಿನಲ್ಲಿ ಶ್ರೇಷ್ಠರಾದ ಬಸವಣ್ಣ ಅವರು ಕನ್ನಡ ಭಾಷೆ ಶ್ರೀಮಂತಗೊಳಿಸಿದರು. ಅನುಭವ ಮಂಟಪ ಸ್ಥಾಪಿಸಿ ಸಾವಿರಾರು ಶರಣ, ಶರಣೆಯರನ್ನು ವಚನ ರಚನೆಗೆ ತೊಡಗಿಸಿದರು’ ಎಂದರು.

ಶರಣ ಸೇವೆಯಲ್ಲಿ ತೊಡಗಿರುವ ವಿ.ಎಸ್. ಪ್ರಭು ಅವರನ್ನು ಅಭಿನಂದಿಸಲಾಯಿತು. ರಾಜಶೇಖರಯ್ಯ ಈಚನೂರು ಸ್ವಾಗತಿಸಿದರು. ಮಹದೇವಮ್ಮ ಸಿದ್ಧರಾಮಯ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.