ಕುಣಿಗಲ್: ಅಂಗನವಾಡಿ ಕೇಂದ್ರಕ್ಕೆ ಮೀಸಲಿಟ್ಟಿದ್ದ ನಿವೇಶನ ಅತಿಕ್ರಮಿಸಿಕೊಂಡು ಮನೆ ನಿರ್ಮಿಸುತ್ತಿರುವ ಬಗ್ಗೆ ಪುರಸಭೆಗೆ ದೂರು ಬಂದಿದ್ದರಿಂದ ಪುರಸಭೆ ಅಧಿಕಾರಿಗಳು ಗುರುವಾರ ಪೊಲೀಸರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ನಿವೇಶನವನ್ನು ವಶಕ್ಕೆ ಪಡೆದರು.
ಪುರಸಭೆಯ 20ನೇ ವಾರ್ಡ್ ಮುತ್ಯಾಲಮ್ಮ ದೇಗುಲದ ಸಮೀಪ ಪುರಸಭೆಯಿಂದ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ನಿವೇಶನ ಮೀಸಲಿರಿಸಲಾಗಿತ್ತು. ಖಾಲಿ ನಿವೇಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದ ಗೋವಿಂದಪ್ಪ ಅವರು ಮಂಜೂರಾತಿ ನಿರೀಕ್ಷೆ ಮೇರೆಗೆ ಮನೆ ನಿರ್ಮಾಣ ಪ್ರಾರಂಭಿಸಿದ್ದರು. ಈ ಬಗ್ಗೆ ಕಾರ್ಮಿಕ ಸೇನೆ ಪದಾಧಿಕಾರಿಗಳು ಪುರಸಭೆಗೆ ದೂರು ನೀಡಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಪುರಸಭೆ ಅಧಿಕಾರಿಗಳು, ನಿವೇಶನ ಪುರಸಭೆ ಸ್ವತ್ತಾಗಿದ್ದು, ಕಟ್ಟಡ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದರೂ, ಗೋವಿಂದಪ್ಪ ನಿರ್ಮಾಣ ಮುಂದುವರೆಸಿದ್ದಾರೆ ಎಂದರು.
ರಸಭೆ ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಎಂಜನಿಯರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಜಗರೆಡ್ಡಿ ತಂಡದವರು ತೆರವುಗೊಳಿಸಲು ತೆರಳಿದ್ದರು. ಗೋವಿಂದಪ್ಪ ಮತ್ತು ಬೆಂಬಲಿಗರು ಅಡ್ಡಿಪಡಿಸಿ, ವಾಗ್ವಾದ ನಡೆಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪುರಸಭೆ ಸದಸ್ಯ ಆನಂದ್ ಕುಮಾರ್ ಒಂದು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಮುಖ್ಯಾಧಿಕಾರಿ ತಿಂಗಳ ಹಿಂದೆಯೇ ಸೂಚನೆ ನೀಡಿ, ಸದಸ್ಯರ ಗಮನಕ್ಕೂ ತಂದರೂ, ಪ್ರಯೋಜನವಾಗದ ಕಾರಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ, ಪೊಲೀಸರ ಸಹಕಾರದಿಂದ ಅತಿಕ್ರಮಿಸಿ ನಿರ್ಮಿಸಿಕೊಂಡಿದ್ದ ಕಟ್ಟಡವನ್ನು ತೆರವುಗೊಳಿಸಿ, ನಿವೇಶನ ವಶಕ್ಕೆ ಪಡೆದು, ಎಚ್ಚರಿಕೆಯ ಫಲಕ ಅಳವಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.