ಶಿರಾ: ನಗರ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯರು ಗುರುವಾರ ರಾತ್ರಿ ಪೂರ್ತಿ ಧರಣಿ ಸತ್ಯಾಗ್ರಹ ನಡೆಸಿದರು.
ನಗರಸಭೆ ಅಧ್ಯಕ್ಷ ಅಂಜಿನಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ಮುಂದಾದರು. ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿ ಸದಸ್ಯರ ನಡುವೆ ಮಾತಿನ ಗದ್ದಲ ನಡೆಯಿತು. ಈ ಸಮಯದಲ್ಲಿ ಅಧ್ಯಕ್ಷ ಅಂಜಿನಪ್ಪ ಸಭೆಯನ್ನು ಏಕಾಏಕಿ ಮುಂದೂಡಿದ್ದನ್ನು ವಿರೋಧಿಸಿ ಸದಸ್ಯರು ಧರಣಿ ಪ್ರಾರಂಭಿಸಿದರು.
ಒಂದು ಕಡೆ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಲ್.ರಂಗನಾಥ್ ಅವರನ್ನು ಅಭಿನಂಧಿಸಿ ಸಂತಸ ವ್ಯಕ್ತ ಪಡಿಸುತ್ತಿದ್ದರೆ. ನಗರಸಭೆ ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಪ್ರಾರಂಭಿಸಿದರು. ರಾತ್ರಿ ಪೂರ್ತಿ ನಗರಸಭೆಯ ಕಚೇರಿಯಲ್ಲೇ 17 ಮಂದಿ ಸದಸ್ಯರು ಮಲಗಿದ್ದರು.
ಧರಣಿ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಭೇಟಿ ನೀಡಿ ಧರಣಿ ನಿರತ ಸದಸ್ಯರ ಜತೆ ಚರ್ಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.