ADVERTISEMENT

ವಕ್ಫ್ ಸಮಿತಿಗೆ ಚುನಾವಣೆ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 16:50 IST
Last Updated 15 ಜೂನ್ 2020, 16:50 IST
ಜಿಲ್ಲಾ ವಕ್ಫ್ ಸಮಿತಿಗೆ ಚುನಾವಣೆ ನಡೆಸುವಂತೆ ಸದಸ್ಯರು ಆಗ್ರಹಿಸಿದರು
ಜಿಲ್ಲಾ ವಕ್ಫ್ ಸಮಿತಿಗೆ ಚುನಾವಣೆ ನಡೆಸುವಂತೆ ಸದಸ್ಯರು ಆಗ್ರಹಿಸಿದರು   

ತುಮಕೂರು: ರಾಜ್ಯ ವಕ್ಫ್ ಸಮಿತಿಯು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಜಿಲ್ಲಾ ವಕ್ಫ್ ಸಮಿತಿಗೆ ನಿರ್ವಹಣಾ ಸಮಿತಿ ನೇಮಿಸಿದೆ. ಈ ಸಮಿತಿಯನ್ನು ಕೈ ಬಿಟ್ಟು ಚುನಾವಣೆ ನಡೆಸಬೇಕು ಎಂದು ಜಿಲ್ಲಾ ವಕ್ಫ್ ಸಮಿತಿ ಸದಸ್ಯರು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾ ವಕ್ಫ್ ಸಮಿತಿ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದರು.

ವಕ್ಫ್ ಸಮಿತಿಗೆ ಚುನಾವಣೆ ನಡೆಸಲು ಜಿಲ್ಲೆಯಾದ್ಯಂತ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಈಗ ಬೈಲಾ ಉಲ್ಲಂಘಿಸಿ ಮಾಜಿ ಶಾಸಕ ರಫೀಕ್ ಅಹ್ಮದ್ ಶಿಫಾರಸಿನಂತೆ ನಿರ್ವಹಣಾ ಸಮಿತಿ ನೇಮಕ ಮಾಡಲಾಗಿದೆ. ಜಿಲ್ಲಾ ವಕ್ಫ್ ಸಮಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯ ವಕ್ಫ್ ಸಮಿತಿ ನೇಮಿಸಿರುವ ನಿರ್ವಹಣಾ ಸಮಿತಿಗೆ ಅಧಿಕಾರ ನೀಡಬಾರದು ಎಂದು ಒತ್ತಾಯಿಸಿದರು.

ನಿರ್ವಹಣಾ ಸಮಿತಿಯಲ್ಲಿರುವ ಸದಸ್ಯರಿಗೆ ತಾವು ಈ ಸಮಿತಿಗೆ ನೇಮಕವಾಗಿರುವ ವಿಚಾರವೇ ಗೊತ್ತಿಲ್ಲ. ವಕ್ಫ್ ಸಮಿತಿಯಲ್ಲಿ ಅನವಶ್ಯವಾಗಿ ರಾಜಕಾರಣ ಮಾಡಲಾಗಿದೆ. ವಕ್ಫ್ ಸಮಿತಿ ಇರುವುದು ಸಮುದಾಯಕ್ಕಾಗಿಯೇ ಹೊರತು ರಾಜಕಾರಣಕ್ಕೆ ಅಲ್ಲ. ಈ ರೀತಿಯ ಪ್ರವೃತ್ತಿಯನ್ನು ರಾಜ್ಯ ವಕ್ಫ್ ಸಮಿತಿ ಕೈಬಿಡಬೇಕು ಎಂದರು.

ADVERTISEMENT

ಸದಸ್ಯತ್ವ ನೋಂದಣಿ ಸಮಯದಲ್ಲಿ ಪ್ರತಿ ಸದಸ್ಯರಿಂದ ₹ 500ರಂತೆ ಮೂರು ಸಾವಿರ ಸದಸ್ಯರಿಂದ ₹ 16 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಲಾಗಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಿ ಆಡಳಿತ ಸಮಿತಿ ಆಯ್ಕೆ ಮಾಡಬೇಕು ಎಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮಾಜಿ ಶಾಸಕರ ಶಿಫಾರಸಿನಂತೆ ನಿರ್ವಹಣಾ ಸಮಿತಿ ನೇಮಕಮಾಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ವಕ್ಫ್ ಆಡಳಿತಾಧಿಕಾರಿ ಪ್ರತಿಕ್ರಿಯಿಸಿ, ‘ಆಡಳಿತ ಸಮಿತಿ ನೇಮಕವಾಗಿರುವುದು ಸರಿಯಲ್ಲ. ಸಮಿತಿಗೆ ಚುನಾವಣೆ ನಿಗದಿಪಡಿಸುವಂತೆ ರಾಜ್ಯ ವಕ್ಫ್ ಸಮಿತಿಗೆ ಜೂನ್ 9ರಂದು ವರದಿ ಕಳುಹಿಸಲಾಗಿದೆ’ ಎಂದು ಸದಸ್ಯರಿಗೆ ತಿಳಿಸಿದರು.

ಮುಖಂಡರಾದ ಸೈಯದ್ ಮುದಾಸೀರ್, ಮುಕ್ತಿಯಾರ್, ಸೈಯದ್ ಬುರಾನ್, ಆರೀಫ್‍ವುಲ್ಲಾ, ಷಫಿ ಅಹಮದ್, ಶಮಿ, ಸುಯೈಲ್, ಜನಸೇವಾ ಸಮಿತಿಯ ಅಹಮದ್, ನಾಸೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.