ಗುಬ್ಬಿ: ತಾಲ್ಲೂಕಿನಾದ್ಯಂತ ಕಳೆದ ಎರಡು– ಮೂರು ದಿನಗಳಿಂದ ಜಡಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯು ಗ್ರಾಮೀಣ ಜನತೆಯ ಬದುಕಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ತಾಲ್ಲೂಕಿನಲ್ಲಿ ರಾಗಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ಮಳೆಯಿಂದಾಗಿ ಬೆಳೆದು ನಿಂತಿದ್ದ ರಾಗಿ ಬೆಳೆಯು ಚಾಪೆ ಹಾಸಿದಂತೆ ಬಿದ್ದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಕೆಲವು ದಿನ ಇದೇ ರೀತಿ ಮಳೆ ಮುಂದುವರಿದರೆ ಬೆಳೆ ಪಡೆದುಕೊಳ್ಳಲು ಕಷ್ಟವಾಗುತ್ತದೆ ಎಂಬುದು ರೈತರ ಅಳಲು.
ರಾಗಿ ಬೆಳೆಯನ್ನು ನಂಬಿಕೊಂಡಿದ್ದ ರೈತರು ಸಾಕಷ್ಟು ಹಣವನ್ನು ಬಿತ್ತನೆ, ರಸಗೊಬ್ಬರಕ್ಕೆ ಖರ್ಚು ಮಾಡಿದ್ದಾರೆ. ಆ ಹಣವನ್ನು ವಾಪಸ್ ಪಡೆಯುವುದಾದರೂ ಹೇಗೆ ಎಂಬ ಚಿಂತೆ ಕಾಡುತ್ತಿದೆ.
‘ಮಳೆಗೆ ರಾಗಿ ಬೆಳೆ ಬಿದ್ದಿದ್ದು, ಇದುವರೆಗೂ ಯಾವುದೇ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಬೆಳೆ ನಷ್ಟದ ಸಮೀಕ್ಷೆ ನಡೆಸಿಲ್ಲ. ರೈತರಿಗೆ ಭರವಸೆ ತುಂಬುವ ಮಾತುಗಳನ್ನು ಆಡುತ್ತಿಲ್ಲ’ ಎಂದರು ರೈತ ಕುಮಾರಸ್ವಾಮಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.