ತುಮಕೂರು: ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಸ್ಲಂ ಸಮಿತಿ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಅಲೆಮಾರಿ ಮಹಾಸಭಾದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
‘ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಅಲೆಮಾರಿ ಸಮುದಾಯದ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಸರ್ಕಾರಿ ಉದ್ಯೋಗ ಇಲ್ಲ. ವಾಸಕ್ಕೆ ಸೂಕ್ತ ಸೂರಿಲ್ಲ, ಕುಡಿಯುವ ನೀರು, ಶೌಚಾಲಯದ ಸೌಲಭ್ಯವಿಲ್ಲ. ರಾಜ್ಯ ಸರ್ಕಾರ ಅಲೆಮಾರಿಗಳನ್ನು ಬೀದಿಯಲ್ಲೇ ಬಿಟ್ಟಿದೆ’ ಎಂದು ಅಲೆಮಾರಿ ಮಹಾಸಭಾದ ರಾಮಕ್ಕ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಮನುಷ್ಯರಲ್ಲವೇ? ರಾಜ್ಯದ ಪ್ರಜೆಗಳಲ್ಲವೇ? ಸುಮಾರು 6 ಲಕ್ಷ ಅಲೆಮಾರಿಗಳನ್ನು ನಿರ್ಲಕ್ಷಿಸಿರುವುದು ಎಷ್ಟು ಸರಿ? ಸಾಮಾಜಿಕ ನ್ಯಾಯದಡಿ ನಮಗೂ ಮೀಸಲಾತಿ ಕೊಡಿ, ನಮ್ಮ ಮಕ್ಕಳ ಭವಿಷ್ಯವನ್ನು ಕಾಪಾಡಿ ಎಂದು ಆಗ್ರಹಿಸಿದರು.
ಸಾವಿತ್ರಿಬಾಯಿ ಫುಲೆ ಸಂಘಟನೆಯ ಅನುಪಮಾ, ‘ಅಲೆಮಾರಿಗಳು ರಾಜಕೀಯ ಶಕ್ತಿ ಎನ್ನುವುದನ್ನು ಸರ್ಕಾರ ಮರೆತಿದೆ. ಪರಿಶಿಷ್ಟ ಜಾತಿಯ ಬಲಾಢ್ಯರ ಜತೆಗೆ ಸ್ಪರ್ಧೆಗೆ ಬಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ’ ಎಂದರು.
ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಮುಖಂಡರಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಕಣ್ಣನ್, ಶಾರದಮ್ಮ, ಪೂರ್ಣಿಮಾ, ಮಂಗಳಮ್ಮ, ಹನುಮಕ್ಕ, ಲಕ್ಷ್ಮಮ್ಮ, ವೆಂಕಟೇಶ್, ಗುರಪ್ಪ, ಸಂತೋಷ್, ನಾಗರಾಜು, ಸುಂಕಮ್ಮ, ಮಾರಯ್ಯ, ರಾಜು, ಗೋವಿಂದ, ಶವಣ್ಣ, ಶಂಕರ್, ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.