ಕೊರಟಗೆರೆ: ಪೆಟ್ರೊಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳ ನಿರಂತರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪೆಟ್ರೊಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.
ಪೆಟ್ರೊಲ್ ಬೆಲೆ ₹50ಕ್ಕಿಂತಲೂ ಕಡಿಮೆ ಮಾಡುವ ಭರಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನಿಲ ದರವನ್ನು ನಿರಂತರವಾಗಿ ಏರಿಸುತ್ತಿದೆ. ಅಚ್ಚೇ ದಿನದ ಭರವಸೆ ನೀಡಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು
ಕಾಂಗ್ರೆಸ್ ಮುಖಂಡ ಜಿ.ವೆಂಕಟಾಚಲಯ್ಯ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಾಗಿದ್ದರೂ ಇಂಧನದ ಮೇಲೆ ಅತಿ ಕಡಿಮೆ ತೆರಿಗೆ ವಿಧಿಸಿ ಜನರ ಕೈಗೆಟಕುವ ಬೆಲೆಯಲ್ಲಿ ಇಂಧನ ನೀಡಲಾಗುತ್ತಿತ್ತು. ಇಂಧನ ದರ ಹೆಚ್ಚಾದ ಪರಿಣಾಮ ದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ, ದೇಶದ ಆರ್ಥಿಕತೆಯನ್ನು ಬದಲಾಯಿಸುತ್ತೇವೆ ಎಂದು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ಮುಖ್ಯ
ಮಂತ್ರಿ ಯಡಿಯೂರಪ್ಪ ಇಬ್ಬರೂ ಜನಸಮಾನ್ಯರ ಬದುಕಿಗೆ ಮಾರಕವಾಗಿ
ದ್ದಾರೆ. ದುಡ್ಡು ಮಾಡಲು ಇದೊಂದೇ ಮಾರ್ಗ ಎಂಬಂತೆ ಇಂಧನದ ಬೆಲೆ ಏರಿಸುತ್ತಲೇ ಇದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಪ.ಪಂ.ಸದಸ್ಯರಾದ ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಚಿಕ್ಕರಂಗಯ್ಯ, ವೆಂಕಟೇಶ್ ಬಾಬು, ಎಲ್.ರಾಜಣ್ಣ, ಜಿ.ಎಸ್.ರವಿಕುಮಾರ್, ವೆಂಕಟಪ್ಪ, ಟಿ.ಸಿ.ರಾಮಯ್ಯ, ಕೆ.ವಿ.ಮಂಜುನಾಥ್, ಗಣೇಶ್, ತುಂಗಾಮಂಜು, ವೀರಣ್ಣಗೌಡ, ಪುಟ್ಟರಾಜು, ದೇವರಾಜು, ಮಹೇಶ್, ನಾಗೇಶ್, ಕೆ.ಎಲ್.ಮಂಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.