
ತುಮಕೂರು: ನಗರದ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನ ಕಟ್ಟೆಗೆ ‘ಟಿಪಿಕೆ ಕೆರೆ’ ಎಂದು ಮರುನಾಮಕರಣ ಮಾಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ವಿರೋಧಿಸಿದ್ದಾರೆ.
‘ಮಹಾನಗರ ಪಾಲಿಕೆಯು ಕಟ್ಟೆಗೆ ಮರು ನಾಮಕರಣ ಮಾಡಿದೆ. ಏರಿಯ ಮೇಲೆ ನಾಮಫಲಕ ಅಳವಡಿಸಲಾಗಿದೆ. ಇದು 600 ವರ್ಷಗಳ ಹಳೆಯ ಕಟ್ಟೆ. 19.1 ಎಕರೆ ವಿಸ್ತೀರ್ಣ ಹೊಂದಿದೆ. ಹಲವು ಗಂಡಾಂತರ ಎದುರಿಸಿ ಪುನರ್ ಜನ್ಮ ಪಡೆದಿದೆ. ಹೆಸರು ಬದಲಾವಣೆ ಮಾಡಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
ಕಟ್ಟೆಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಿಸಿದ್ದಾರೆ. ಬಫರ್ ವಲಯದಲ್ಲಿ ಕಾಂಪೌಂಡ್ ಕಟ್ಟಲಾಗಿದೆ. ಕೋಡಿ ಹರಿಯುವ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಇದೆಲ್ಲವನ್ನು ಕಂಡರೂ ಕಾಣದಂತಿದ್ದಾರೆ. ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೊಸ ನಾಮಫಲಕ ತೆಗೆಸಬೇಕು. ಒತ್ತುವರಿ ತೆರವು ಮಾಡಬೇಕು. ಕಟ್ಟೆಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.