ತುಮಕೂರು: ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ದೇಶದ ಮೇಲೆ ಆಕ್ರಮಣ ನಡೆಯುತ್ತಿದೆ. ಇದರ ಉದ್ದೇಶ ಕೇವಲ ವಿಸ್ತರಣಾವಾದವಲ್ಲ. ಹಿಂದೂ ಧರ್ಮದ ನಾಶ ಎಂದು ಹಿಂದೂ ಜನ ಜಾಗೃತಿ ಸಮಿತಿಯ ಸಮನ್ವಯಕಾರ ಶರತ್ಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಹಿಂದೂ ಜನ ಜಾಗೃತಿ ಸಮಿತಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇದರ ವಿರುದ್ಧದ ಹೋರಾಟ ನಡೆಸಲು ಮತ್ತು ಧರ್ಮ ಸ್ಥಾಪನೆಗಾಗಿ ಎಲ್ಲರು ಸಂಘಟಿತರಾಗಬೇಕು. ನಿಸ್ವಾರ್ಥ ಸಂಘಟನೆ ನಿರ್ಮಾಣದಿಂದ ರಾಮ ರಾಜ್ಯದ ಕನಸು ಸಾಕಾರಗೊಳ್ಳುತ್ತದೆ. ಸಂಘಟನೆ ಬಲಪಡಿಸಲು ಪ್ರತಿಯೊಬ್ಬರು ಬದ್ಧರಾಗಿರಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಈ ಹಿಂದೆ ಧರ್ಮಕ್ಕಾಗಿ ಹಲವು ಸಂಘಟನೆಗಳನ್ನು ಸ್ಥಾಪಿಸಲಾಗಿತ್ತು. ಈಗಲೂ ಇಂತಹ ಸಂಘಟನೆಯ ಅವಶ್ಯಕತೆಯಿದೆ. ಅಧರ್ಮದ ವಿರುದ್ಧ ಸಂಘಟಿತರಾಗಿ ಪ್ರಯತ್ನಿಸುವುದು ನಿಜವಾದ ಗುರು ಕಾಣಿಕೆ ಎಂದರು.
ವಕೀಲೆ ಶಕುಂತಲಾ ಶೆಟ್ಟಿ, ‘ಗುರುಗಳು ನಮ್ಮನ್ನು ಅಜ್ಞಾನದಿಂದ ಜ್ಞಾನದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಮಹತ್ತರ ಕಾರ್ಯ ಮಾಡುತ್ತಾರೆ. ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣದ ಮಾರ್ಗದರ್ಶನ ಮಾಡಬೇಕು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಕನಿಷ್ಠ ಇಂತಹ ಕಾರ್ಯಕ್ರಮ ನಡೆದಾಗ ಎಲ್ಲರು ಒಂದಾಗಬೇಕು. ಕಾನೂನು ಬಗ್ಗೆ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.