ಕೊಡಿಗೇನಹಳ್ಳಿ: ಹೋಬಳಿಯ ಪೊಲೇನಹಳ್ಳಿ ಗ್ರಾಮದ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆಯನ್ನು ರಾಜ್ಯ ಸರ್ಕಾರವೇ ವಶಕ್ಕೆ ಪಡೆದುಕೊಂಡು ನಡೆಸಬೇಕೆಂದು ಒತ್ತಾಯಿಸಿ ಸೋಮ ವಾರ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಮತ್ತು ನಿವೃತ್ತ ಶಿಕ್ಷಕರು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ 1979-80ರಲ್ಲಿ ಆರಂಭವಾಗಿದ್ದ ವಿವೇಕಾನಂದ ವಿದ್ಯಾ ಪ್ರಚಾರಕ ಸಂಘ ಮೊದಲಿಗೆ ಸರ್ಕಾರದ ಆದೇಶದಂತೆ ಸುಗಮವಾಗಿ ನಡೆಯುತ್ತಿತ್ತು. ಆದರೆ, ಸಂಸ್ಥೆಯ ಆಡಳಿತ ಮಂಡಳಿ ಬದಲಾಗುತ್ತಾ ಬಂದಿತು. ಕೊನೆಯದಾಗಿ ಬಂದಂ ತಹ ಆಡಳಿತ ಮಂಡಳಿಯಲ್ಲಿ ಅವ್ಯವಹಾರ ಗಳು ಜಾಸ್ತಿಯಾಗಿವೆ ಎಂದು ದೂರಿದರು.
ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಂದೇ ಕುಟುಂಬದ ರಾಗಿದ್ದಾರೆ. ಇವರ ವಿರುದ್ಧ ಜಮೀನಿನ ಮೂಲ ದಾನಿಗಳು ಹಾಗೂ ಕೆಲವು ಸದಸ್ಯರು ನ್ಯಾಯಾ ಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಸಂಸ್ಥೆಯ ಬೈಲಾ ಉಲ್ಲಂಘನೆಯಾಗಿರುವುದು ಸಾಬೀತಾಗಿದೆ. ಹಾಗಾಗಿ, ಸಂಸ್ಥೆಯ ಆಡಳಿತ ಮಂಡಳಿಯನ್ನು ವಿಸರ್ಜಿಸಲಾಯಿತು ಎಂದು ತಿಳಿಸಿದರು.
ಸುಮಾರು 15-16 ವರ್ಷಗಳಿಂದ ಸಂಸ್ಥೆಗೆ ಯಾವುದೇ ಆಡಳಿತ ಮಂಡಳಿ ಇಲ್ಲ. ಇದರಿಂದ ಶಾಲೆ ಮತ್ತು ವಿದ್ಯಾರ್ಥಿಗಳು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಸಂಸ್ಥೆಯ ಚರ-ಸ್ಥಿರಾಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ಲಕ್ಷ್ಮಣ, ಸದಸ್ಯ ಪ್ರದೀಪ್ ಕುಮಾರ್, ನಿವೃತ್ತ ಶಿಕ್ಷಕರಾದ ನರಸಿಂಹಯ್ಯ, ಪ್ರಕಾಶ್ ರಾವ್, ನಾರಾಯಣ ರೆಡ್ಡಿ, ಗ್ರಾಮಸ್ಥರಾದ ಎಂ.ಜಿ. ತಿಮ್ಮಾರೆಡ್ಡಿ, ಪಿ.ಎನ್. ನಾರಾಯಣಪ್ಪ, ಪಿ.ಜಿ. ನಾರಾಯಣಪ್ಪ, ಎಂ.ಎಸ್. ಗೋಪಾಲಯ್ಯ, ನಿಂಗಪ್ಪ, ಶಿವಣ್ಣ, ಮಲ್ಲಪ್ಪ, ಮಲ್ಲಿ ಕಾರ್ಜುನಯ್ಯ, ನರಸೀಯಪ್ಪ, ಪಿ.ಎ. ಹನುಮಂತರಾಯಪ್ಪ, ಪಿ.ಆರ್. ಗೋಪಾಲ್, ವೆಂಕಟರವಣಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.