ತುಮಕೂರು: ಕಚೇರಿಗೆ ಬೀಗ ಹಾಕದೆ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಯಳನಾಡು ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಕೆ.ಮಲ್ಲೇಶಚಾರಿ ಹಾಗೂ ಕಾರ್ಯದರ್ಶಿ ಎಸ್.ಕಾವ್ಯ ಅವರಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಏ.17ರಂದು ಪಂಚಾಯಿತಿಯ ಕೆಲಸದ ಸಮಯ ಮಧ್ಯಾಹ್ನ 2ರ ವೇಳೆಯಲ್ಲಿ ಕಚೇರಿಗೆ ಹಾಜರಾಗದೆ ಹಾಗೂ ಕೆಲಸ ನಿರ್ವಹಿಸದಿದ್ದರೂ ಕಚೇರಿಗೆ ಬೀಗ ಹಾಕದೆ ನಿರ್ಲಕ್ಷ್ಯ ತೋರಲಾಗಿದೆ. ಇದರಿಂದ ಸರ್ಕಾರಿ ಆಸ್ತಿ ಮತ್ತು ದಾಖಲೆಗಳನ್ನು ನಾಶಪಡಿಸಲು ನೀವೇ ದಾರಿ ಮಾಡಿಕೊಟ್ಟಿರುತ್ತೀರಿ. ಸರ್ಕಾರಿ ಕೆಲಸದಲ್ಲಿ ಲೋಪ ಎಸಗಿರುತ್ತೀರಿ. ಈ ದಿನ ಕಚೇರಿಯ ಮುಖ್ಯಸ್ಥರ ಅನುಮತಿಯನ್ನೂ ಪಡೆಯದೆ ಕೆಲಸಕ್ಕೆ ಗೈರಾಗಿದ್ದೀರಿ.
ಈ ಲೋಪಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು ಮೂರು ದಿನಗಳ ಒಳಗೆ ಪೂರಕ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ತಪ್ಪಿದರೆ ಕರ್ನಾಟಕ ನಾಗರಿಕ ಸೇವಾ ನಿಯಮದ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರಿಗೆ ಶಿಫಾರಸು ಮಾಡಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.