ADVERTISEMENT

ಲಸಿಕೆಗಾಗಿ ಜನರ ಚಕಮಕಿ

ಪೊಲೀಸರ ಮಧ್ಯಪ್ರವೇಶ: ನಿರಾಸೆಯಿಂದ ಮನೆಗೆ ಮರಳಿದ ಜನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:37 IST
Last Updated 4 ಜೂನ್ 2021, 2:37 IST
ಲಸಿಕೆಗಾಗಿ ಕಾದ ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಲಸಿಕೆಗಾಗಿ ಕಾದ ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ತಿಪಟೂರು: 18 ವರ್ಷದಿಂದ 44 ವರ್ಷದವರಿಗೆ ಲಸಿಕೆ ನೀಡುವುದಾಗಿ ತಿಳಿಸಿ, ಟೋಕನ್ ನೀಡಿದ ನಂತರ ನೀಡಲು ಸಾಧ್ಯವಿಲ್ಲ ಎಂದಾಗ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಿ ನೂರಕ್ಕೂ ಹೆಚ್ಚು ಜನರನ್ನು ವಾಪಸ್‌ ಕಳುಹಿಸಿರುವ ಘಟನೆ ನಡೆದಿದೆ.

ನಗರದ ಗಾಂಧಿನಗರ ಪಾರ್ಕ್ ಪಕ್ಕದಲ್ಲಿರುವ ಪ್ರಾಥಮಿಕ ಕೇಂದ್ರದಲ್ಲಿನ ಸಿಬ್ಬಂದಿ ವಾಟ್ಸ್‌ಆ್ಯಪ್‌ ಮೂಲಕ 18ರಿಂದ 44 ವರ್ಷದವರಿಗೆ ನಿತ್ಯ 100 ಜನರಿಗೆ ಲಸಿಕೆ ನೀಡಲಾಗುವುದು ಎಂಬ ಸಂದೇಶ ರವಾನಿಸಿದ್ದಾರೆ. ನೂರಾರು ಜನ ಬೆಳಗ್ಗೆಯಿಂದ ಬಂದು ಕಾಯುತ್ತಿದ್ದಾರೆ. 100 ಜನರಿಗೆ ಟೋಕನ್ ವಿತರಿಸಿ ಕಾದು ಕುಳಿತಿದ್ದಾರೆ.

ಲಸಿಕೆ ತೆಗೆದುಕೊಂಡು ಬಂದಾಗ ಇವರಿಗೆಲ್ಲ ಕೊಡಲು ನಿರಾಕರಿಸಿ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ. ಬೆಳಗ್ಗಿನಿಂದ ಕಾದು ಟೋಕನ್ ತೆಗೆದುಕೊಂಡಿದ್ದವರು ತಕರಾರು ತೆಗೆದಿದ್ದಾರೆ.

ADVERTISEMENT

‘ಸಿಬ್ಬಂದಿ ಮಾಹಿತಿಯ ಆಧಾರದಲ್ಲಿಯೇ ಲಸಿಕೆ ಪಡೆಯಲು ಬಂದಿದ್ದು, ಟೋಕನ್ ನೀಡಿದ ನಂತರ ಕೊಡುವುದಿಲ್ಲ ಎಂದರೆ ಹೇಗೆ? ನಾವು ಯಾರೂ ವಾಪಸ್ ಹೋಗುವುದಿಲ್ಲ’ ಎಂದು ಜನರು ಅಲ್ಲಿಯೇ ಕುಳಿತಿದ್ದಾರೆ.

ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಬಂದು ಸಾರ್ವಜನಿಕರ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ಬಂದು ಜನರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

ಜುಲೈ ಮೊದಲ ವಾರದಲ್ಲಿ ಆದ್ಯತೆಯ ಮೇರೆಗೆ ನೂರು ಜನರಿಗೆ ಲಸಿಕೆ ನೀಡಲಾಗುವುದು ಎಂಬ ಸಿಬ್ಬಂದಿ ಭರವಸೆ ನೀಡಿದ ನಂತರ ಸಾರ್ವಜನಿಕರು ವಾಪಸ್‌ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.