ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಕೌಶಲ ಅವಶ್ಯ

ವಿ.ವಿಯಲ್ಲಿ ನಡೆದ ಸ್ವ ವಿವರ ರಚನೆ ಮತ್ತು ಸಂದರ್ಶನ ಸಿದ್ಧತೆ ಕಾರ್ಯಾಗಾರದಲ್ಲಿ ಸಿದ್ದೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 16:55 IST
Last Updated 24 ಏಪ್ರಿಲ್ 2019, 16:55 IST

ತುಮಕೂರು: ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿತ್ಯ ಶ್ರಮಿಸುತ್ತಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ನುಡಿದರು.

ವಿವಿಯ ಪರೀಕ್ಷಾಂಗ ಭವನದಲ್ಲಿ ವಿವಿಯ ಕೌಶಲಾಭಿವೃದ್ಧಿ ಕೇಂದ್ರದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವ ವಿವರ ರಚನೆ ಮತ್ತು ಸಂದರ್ಶನ ಸಿದ್ಧತೆ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ಕೌಶಲ ಮತ್ತು ಜ್ಞಾನ ಭರಿತ ಸಂಪತ್ತನ್ನಾಗಿ ಮಾರ್ಪಡಿಸಿ ಕೊಡುಗೆಯಾಗಿ ನೀಡುವ ಸಂಕಲ್ಪ ಮಾಡಿದ್ದೇವೆ. ಹಾಗಾಗಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಬಹುಭಾಷಾ ಮತ್ತು ವ್ಯಕ್ತಿತ್ವ ವಿಕಸನ ಕೌಶಲಗಳು ಅತ್ಯಗತ್ಯ ಎಂದು ಹೇಳಿದರು.

ADVERTISEMENT

ವ್ಯಕ್ತಿತ್ವ ವಿಕಸನ ಮತ್ತು ಕಲಿಕೆಯ ಸಾಮರ್ಥ್ಯ ಕುಂಠಿತವಾಗಲು ಆಧುನಿಕ ಜೀವನ ಶೈಲಿಯ ತಂತ್ರಜ್ಞಾನವು ಕೂಡ ಕಾರಣವಾಗಿದೆ. ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನ ಅವಲಂಬಿಸಿ, ಹೆಚ್ಚು ಕೌಶಲ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ ಎಂದರು.

ಮೂರು ದಿನಗಳ ಈ ಕಾರ್ಯಗಾರದಲ್ಲಿ ವಿಶ್ವವಿದ್ಯಾನಿಲಯದ 19 ಸ್ನಾತಕೋತ್ತರ ಅಧ್ಯಯನ ವಿಭಾಗಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಂತ ಹಂತವಾಗಿ ಸದುಪಯೋಗ ಪಡೆಯುವರು ಎಂದು ತಿಳಿಸಿದರು.

ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯ್ಕ್, ಮಿತ್ರ ಫೌಂಡೇಷನ್‌ ಅಧ್ಯಕ್ಷ ಸಿ.ಸಿ.ಪಾವಟೆ, ಕೌಶಲಾಭಿವೃದ್ಧಿ ಘಟಕದ ಸಂಯೋಜಕ ಪ್ರೊ.ಕೆ.ಜಿ ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.