ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಕ್ರೀಡಾಪಟು ಕೆ.ಎಸ್.ರಾಜಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜು, ಮುಖಂಡರಾದ ಟಿ.ಎ.ರವಿಕುಮಾರ್, ಕೆ.ವಿ.ಗೋವರ್ಧನಚಾರ್, ಎಚ್.ಆರ್.ಚಂದ್ರಶೇಖರಾಚಾರ್ ಇತರರು ಉಪಸ್ಥಿತರಿದ್ದರು
ತುಮಕೂರು: ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 12,157 ಫಲಾನುಭವಿಗಳಿಗೆ ₹82 ಕೋಟಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ನಗರದಲ್ಲಿ ಬುಧವಾರ ಜಿಲ್ಲಾ ಆಡಳಿತ, ವಿಶ್ವಕರ್ಮ ಸೇವಾ ಸಮಿತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮ ಪಂಚಾಯಿತಿ ಹಂತದಿಂದ ಅರ್ಜಿ ಸ್ವೀಕರಿಸಿ, ಮೂರು ಹಂತದಲ್ಲಿ ಪರಿಷ್ಕರಿಸಿ, ಅಂತಿಮವಾಗಿ ಅರ್ಹರಿಗೆ ಸವಲತ್ತು ನೀಡಲಾಗಿದೆ ಎಂದರು.
ನಿಟ್ಟರಹಳ್ಳಿ ಮಠದ ನೀಲಕಂಠಾಚಾರ್ಯ ಸ್ವಾಮೀಜಿ, ‘ವಿಶ್ವಕರ್ಮ ಸಮುದಾಯ ಸದಾ ಒಗ್ಗಟ್ಟಾಗಿರಬೇಕು. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಸಮುದಾಯದವರು ವಿಶ್ವಕರ್ಮ ಎಂದೇ ನಮೂದಿಸಬೇಕು’ ಎಂದು ಸಲಹೆ ಮಾಡಿದರು.
ಕ್ರೀಡಾಪಟು ಕೆ.ಎಸ್.ರಾಜಣ್ಣ, ‘ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಸಿದ ಪರಿಣಾಮ ಸಮಾಜದಲ್ಲಿ ಒಗ್ಗಟ್ಟು ಹಾಳಾಗಿದೆ. ಎಲ್ಲರೂ ಒಂದಾಗಬೇಕು. ಗುಡಿ, ಗೋಪುರ ಕಟ್ಟಿದ ನಾವು ಮಾತ್ರ ಗುಡಾರದಲ್ಲಿಯೇ ಉಳಿದಿದ್ದೇವೆ. ವಿಶ್ವಕರ್ಮ ಜಯಂತಿ ಎಲ್ಲರಿಗೂ ಆತ್ಮಾವಲೋಕನದ ದಿನವಾಗಬೇಕು’ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್, ‘ಕುಲಕಸುಬು ಹೊಂದಿರುವ ವಿಶ್ವಕರ್ಮ ಜನಾಂಗ ನಾವೀನ್ಯತೆಗೆ ಹೆಸರಾಗಿದೆ. ಕಸುಬಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ, ಉನ್ನತಿಗೆ ತಲುಪಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದ ಟಿ.ಎನ್.ಪರಮೇಶ್ವರಾಚಾರ್, ಆರ್.ನಾಗಾಚಾರ್, ಜಿ.ಎಂ.ಆನಂದಾಚಾರ್, ಎಸ್.ಹರೀಶ್ ಆಚಾರ್ಯ, ಶಕುಂತಲಾ ಚನ್ನಪ್ಪಾಚಾರ್, ಕೆ.ಪಟ್ಟಾಚಾರ್ ಅವರನ್ನು ಗೌರವಿಸಲಾಯಿತು. ವೀರಶಿವಕುಮಾರ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜು, ಮುಖಂಡರಾದ ಟಿ.ಎ.ರವಿಕುಮಾರ್, ಕೆ.ವಿ.ಗೋವರ್ಧನಚಾರ್, ಎಚ್.ಆರ್.ಚಂದ್ರಶೇಖರಾಚಾರ್, ಎನ್.ಎಸ್.ರವಿ, ಟಿ.ಎನ್.ಗುರುರಾಜು, ಬಿ.ಚಂದ್ರಬಾಬು ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.