ತುಮಕೂರು: ಅಖಿಲ ಭಾರತ ರೈತ ಕೃಷಿ- ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಏ. 28 ಮತ್ತು 29ರಂದು ಎರಡು ದಿನಗಳ ಕಾಲ ಧಾರವಾಡದಲ್ಲಿ ಹಮ್ಮಿಕೊಂಡಿರುವಸಮ್ಮೇಳನದ ಕುರಿತು ಸೋಮವಾರಪ್ರಚಾರಾಂದೋಲನ ಜಾಥಾ ನಡೆಯಿತು.
ಎಐಕೆಕೆಎಂಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಿಂದ ಜಾಥಾ ಪ್ರಾರಂಭಿಸಿ ಯಲ್ಲಾಪುರ, ರಾಮಗೊಂಡನಹಳ್ಳಿ, ಚಿಕ್ಕತೊಟ್ಲುಕೆರೆ, ಕರಿಕೆರೆ ಮಾರ್ಗವಾಗಿ ಊರ್ಡಿಗೆರೆವರೆಗೂ ಜಾಥಾ ನಡೆಸಿದರು.
ಎಐಕೆಕೆಎಂಎಸ್ ರಾಜ್ಯ ಸಮಿತಿ ಸದಸ್ಯ ಎಚ್.ಪಿ.ಶಿವಪ್ರಕಾಶ್ ಮಾತ ನಾಡಿ, ‘ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದ ಮಾರುಕಟ್ಟೆ ತೆರೆದಿಟ್ಟು, ದೇಶದ ಸಂಪನ್ಮೂಲ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿತ್ತು. ಇದೀಗ ಬಿಜೆಪಿ ಸರ್ಕಾರ ಜನ ಸಾಮಾನ್ಯರನ್ನು ನಿರ್ಗತಿಕರನ್ನಾಗಿ ಮಾಡಿ, ಕಾರ್ಪೊರೇಟ್ ಸಂಸ್ಥೆಗಳಿಗೆ ನೆರವು ನೀಡುತ್ತಿದೆ’ ಎಂದರು.
ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ‘ಕೇಂದ್ರ, ರಾಜ್ಯ ಸರ್ಕಾರಗಳ ಕೃಷಿ ನೀತಿಗಳು ಹಾಗೂ ವಿದ್ಯುತ್ ಮಸೂದೆ ಕೇವಲ ರೈತ ವಿರೋಧಿಯಲ್ಲ, ಅದು ಜನ ವಿರೋಧಿ ಕೂಡ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಎಪಿಎಂಸಿ ಹಲ್ಲಿಲ್ಲದ ಹಾವಿನಂತಾಗಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.