ತುಮಕೂರು: ಗುಂಡ್ಲುಪೇಟೆ ತಾಲ್ಲೂಕು ಕಬ್ಬೆಕಟ್ಟೆ ಗ್ರಾಮದಲ್ಲಿ ದಲಿತ ಯುವಕನನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಖಂಡಿಸಿ ನಗರದ ಟೌನ್ಹಾಲ್ನಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಇಡೀ ರಾಜ್ಯವೇ ಈ ಪ್ರಕರಣದಿಂದ ತಲೆ ತಗ್ಗಿಸಬೇಕಾಗಿದೆ. ಇಂತಹ ನೀಚ ಕೃತ್ಯ ಎಸಗಿದವರನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಪದೇ ಪದೇ ದಲಿತರ ಮೇಲೆ ಹಲ್ಲೆ, ದೌರ್ಜನ್ಯದ ಪ್ರಕರಣಗಳು ಜರುಗುತ್ತಿವೆ. ಕರ್ನಾಟಕವು ಮತ್ತೊಂದು ಬಿಹಾರ ಎನ್ನುವಂತೆ ಆಗಿದೆ ಎಂದು ದೂರಿದರು.
ಪೊಲೀಸರು ದಲಿತ ಯುವಕನನ್ನು ಮಾನಸಿಕ ಅಸ್ವಸ್ಥ ಎಂದು ಕಥೆ ಕಟ್ಟುತ್ತಿದ್ದಾರೆ. ಈ ಕಥೆಯ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ಇದೆ. ಇಂತಹ ಪ್ರಕರಣಗಳು ರಾಜ್ಯದಲ್ಲಿ ಮತ್ತೆ ನಡೆಯಬಾರದು. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಬಲ್ ರಘು, ಪಿ.ಎನ್.ರಾಮಯ್ಯ, ರಾಜಣ್ಣ, ಮಧು, ರಾಮಾಂಜಿ, ಗೂಳರಿವೆ ನಾಗರಾಜ್, ಮಾರನಹಳ್ಳಿ ಶಿವಣ್ಣ, ಕೊಡಿಯಾಲ ಮಹಾದೇವ, ಗೋಪಿ, ಯೋಗೀಶ್, ನಾಗೇಶ್, ನಾಗರಾಜು ಗುಬ್ಬಿ, ಶಿವನಂಜಯ್ಯ ಚೇಳೂರು ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.