ತುಮಕೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತ ಸಂಘ ಹಾಗೂ ಹಸಿರು ರಾಜ್ಯ ಉಪಾಧ್ಯಕ್ಷ ಕೆಂಕರೆ ಸತೀಶ್ ಮಾತನಾಡಿ, ‘ಬಿಜೆಪಿ ಶಾಸಕರು ಸಚಿವರಾಗುವ ಮುನ್ನ ಸನ್ನಡತೆಯಿಂದ ನಡೆದುಕೊಳ್ಳುತ್ತಿದ್ದರು. ಈಗ ಹೇಗೆ ಬದಲಾಗುತ್ತಿದ್ದಾರೆ ಎನ್ನುವುದನ್ನು ನೋಡುತ್ತಿದ್ದೇವೆ. ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ದೇಶದ ಆರ್ಥಿಕ ಕುಸಿತವನ್ನು ಮರೆಮಾಚುತ್ತಿದ್ದಾರೆ’ ಎಂದು ಆರೋಪಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ‘ಪ್ರಗತಿಪರ ಚಿಂತಕರನ್ನು, ಹೋರಾಟಗಾರರನ್ನು ಅವಹೇಳನ ಮಾತನಾಡುವ ಬಿಜೆಪಿ ಶಾಸಕರು ತಮ್ಮ ಸಂಸ್ಕೃತಿ ತೋರ್ಪಡಿಸುತ್ತಿದ್ದಾರೆ. ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ಎಚ್.ಎಸ್.ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದಿರುವುದು ಖಂಡನೀಯ’ ಎಂದು ಹೇಳಿದರು.
ಯತ್ನಾಳ್ ಅವರಂತಹ ದೇಶದ್ರೋಹಿಗಳು ದೇಶ ಹಾಗೂ ರಾಜ್ಯಕ್ಕೆ ಅಗತ್ಯವಿಲ್ಲ. ಇಂತಹ ನಿಜವಾದ ದೇಶದ್ರೋಹಿಗಳ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಧನಂಜಯ ಆರಾಧ್ಯ, ಕುಣಿಗಲ್ ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್, ಕೊರಟಗೆರೆ ಸಿದ್ದರಾಜು, ರುದ್ರೇಶ್ ಗೌಡ, ಲಕ್ಕಣ್ಣ, ಪ್ರಸನ್ನ, ವೆಂಕಟೇಶ್, ಕುಮಾರ್, ನಾಗಣ್ಣ, ತಿಪಟೂರು ದೇವರಾಜು ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.