ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಕೆರೆಯ ಹೂಳು ತೆಗೆದು ತಳಭಾಗದಲ್ಲಿ ಕಾಂಕ್ರೀಟ್ ನಿರ್ಮಾಣ ಮಾಡಬೇಕೆಂಬ ಯೋಜನೆ ಜಾರಿಯಾಗುತ್ತದೆ ಎಂಬ ಮಾತಿದೆ. ಈ ರೀತಿ ಕಾಂಕ್ರೀಟ್ ನಿರ್ಮಾಣ ಮಾಡಿದರೆ ರೈತರ ತೋಟಕ್ಕೆ ನೀರಿನ ಅಭಾವ ಉಂಟಾಗುತ್ತದೆ. ಪ್ರಸ್ತುತ ತಾಲ್ಲೂಕಿನ ಜನರ ಹಿತಕ್ಕಾಗಿ ನೀರಾವರಿ ಹೋರಾಟ ಅನಿವಾರ್ಯ ಎಂದು ಪುರಸಭಾ ಮಾಜಿ ಅಧ್ಯಕ್ಷ ಸಿಡಿ ಚಂದ್ರಶೇಖರ್ ಹೇಳಿದರು.
ಭಾನುವಾರ ನೀರಾವರಿ ಸಮಿತಿ ಹೋರಾಟಗಾರರಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿರುವ ಯಾವುದೇ ಕೆರೆಯಲ್ಲೂ ಹೂಳು ಎತ್ತುವ ಕೆಲಸ ನಡೆದಿಲ್ಲ. ಈ ಹಿಂದೆ ಹೇಮಾವತಿ ನೀರಿಗಾಗಿ ಹೋರಾಟ ಮಾಡಿದ್ದೇವೆ. ಕೆಬಿ ಕ್ರಾಸ್ವರೆಗೂ ಪಾದಯಾತ್ರೆ ಮೂಲಕ ಹೇಮಾವತಿ ನೀರು ತರಲು ಹೋರಾಟ ನಡೆಸಿದ್ದೇವೆ ಎಂದರು.
ಸಮಿತಿಯ ಸಲಹಾ ಸದಸ್ಯ ವಿನಯ್ ಮಾತನಾಡಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕೆಂದು ಹೇಮಾವತಿಯನ್ನು ತಾಲ್ಲೂಕಿಗೆ ತರುವಂತಾಯಿತು. ಸರ್ಕಾರ ಅನುದಾನ ನೀಡಿದರು ಅನುಷ್ಠಾನಕ್ಕೆ ಬರದೇ ಇರುವುದು ಈಗಿನ ದುಸ್ಥಿತಿ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಜೆಸಿ ಪುರ ಕೆರೆ ಹಾಗೂ ಎಲ್ಲ ಕೆರೆಗಳಿಗೂ ನೀರು ತರುವ ವ್ಯವಸ್ಥೆ ಮಾಡಿದ್ದರು. ಪ್ರಾರಂಭದಲ್ಲಿ ನೀರು ಬಂತಾದರೂ ಅಲ್ಲಿಂದ ಮುಂದೆ ಪೈಪ್ಲೈನ್ ಕಾಮಗಾರಿ ಪ್ರಾರಂಭಗೊಂಡಿತು. ಕಾಮಗಾರಿ ಯಾವ ಸ್ಥಿತಿಯಲ್ಲಿದೆ? ಯಾವ ಕೆರೆಗೆ ನೀರು ಹೋಗಿದೆ ಎಂದು ಇಲ್ಲಿವರೆಗೂ ಯಾವುದೇ ಮಾಹಿತಿ ಇಲ್ಲ. ಈಗಿನ ಕಾಲಘಟ್ಟದಲ್ಲಿ ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಪದ್ಧತಿ ಶುರುವಾಗಿದೆ ಎಂದರು.
ವಕೀಲ ಎಂಬಿ ನಾಗರಾಜ್ ಮಾತನಾಡಿ, ನೀರಿಗಾಗಿ ಎಲ್ಲೆಡೆ ಹೋರಾಟ ಪ್ರಾರಂಭವಾಗುತ್ತಿದೆ. ಜನರು ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ. ಹೋರಾಟ ನಿರ್ದಿಷ್ಟ ದಿಕ್ಕಿನಲ್ಲಿ ಸಾಗದೆ ಚದುರಿ ಹೋಗುವ ಸನ್ನಿವೇಶ ಉಂಟಾಗಿದೆ. ನೀರಾವರಿ ವಿಚಾರವಾಗಿ ಸಕ್ರಿಯವಾಗಿ ಹೋರಾಟ ಮಾಡಬೇಕು ಎಂದರು.
ಗೌರವಾಧ್ಯಕ್ಷ ಬೇವಿನಹಳ್ಳಿ ಚೆನ್ನಬಸವಯ್ಯ ಮಾತನಾಡಿ, ತಾಲ್ಲೂಕಿಗೆ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತರಲು ಪ್ರಯತ್ನಿಸಬೇಕು ಎಂದರು
ಸಮಿತಿ ಅಧ್ಯಕ್ಷ ವೀರಪ್ಪ ಮಾತನಾಡಿ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತಾಲ್ಲೂಕಿಗೆ ನೀರು ಹರಿಸಲು ಯಾವ ರೀತಿಯಾಗಿ ಹಂಚಿಕೆಯಾಗಿದೆ ಎಂಬುದು ಸರಿಯಾದ ಮಾಹಿತಿ ದೊರೆತಿಲ್ಲ. ಎತ್ತಿನಹೊಳೆಯಿಂದ 19 ಕೆರೆ ತುಂಬಿಸುವ, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕಂದಿಕೆರೆ, ಹುಳಿಯಾರು ಭಾಗದ ಕೆರೆಗಳಿಗೆ ನೀರು ಹರಿಯುತ್ತದೆ. ಎತ್ತಿನಹೊಳೆ ಯೋಜನೆ ಕುಂಠಿತವಾಗಿ ಸಾಗುತ್ತಿದೆ. ಈ ಮೂರು ಯೋಜನೆಗಳಿಂದ ಕೆರೆಗಳಿಗೆ ನೀರು ಹರಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ನೀರಾವರಿ ಸಮಿತಿ ಕಾರ್ಯದರ್ಶಿ ಚಿದಾನಂದ್, ಮಂಜುನಾಥ್, ಯರೆಕಟ್ಟೆ ರಮೇಶ್, ಕೃಷ್ಣೆಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.