
ತುಮಕೂರಿನಲ್ಲಿ ಶುಕ್ರವಾರ ಸರ್ಕಾರ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ, ಉಪನ್ಯಾಸಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ತುಮಕೂರು: ಅವೈಜ್ಞಾನಿಕವಾಗಿ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವುದು, ಖಾಲಿ ಹುದ್ದೆ ಭರ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ, ಉಪನ್ಯಾಸಕರ ಸಂಘದಿಂದ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
‘ಸರ್ಕಾರ ಕಾಲೇಜುಗಳಿಗೆ ಪೂರಕವಲ್ಲದ ಆದೇಶ ಹೊರಡಿಸುತ್ತಿದೆ. ಇದು ದೈನಂದಿನ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಾಂಶುಪಾಲರು, ಉಪನ್ಯಾಸಕರು ಆತ್ಮಸ್ಥೈರ್ಯ ಕುಗ್ಗಿಸುತ್ತದೆ’ ಎಂದು ಪ್ರಾಂಶುಪಾಲರ ಸಂಘದ ಅಧ್ಯಕ್ಷ ನೇ.ರಂ.ನಾಗರಾಜು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಬಲವರ್ಧನೆ ಮಾಡಬೇಕು. ಇಬ್ಬರು ಹಿರಿಯ ಪ್ರಾಂಶುಪಾಲರನ್ನು ಸಹಾಯಕ ನಿರ್ದೇಶಕ ಹುದ್ದೆಗಳಿಗೆ ನೇಮಿಸಬೇಕು. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿರುವ ಪರೀಕ್ಷಾ ವಿಭಾಗವನ್ನು ಇಲಾಖೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಹಾಗೂ ಸಂಭಾವನೆಯ ಬಾಕಿ ₹13.5 ಕೋಟಿ ಬಿಡುಗಡೆ, ಉನ್ನತ ಶಿಕ್ಷಣದಂತೆ ಪದವಿ ಪೂರ್ವ ಹಂತದಲ್ಲಿಯೂ ಅಕಾಡೆಮಿಕ್ ಕೌನ್ಸಿಲ್ ಸಮಿತಿ ರಚಿಸಬೇಕು. ನಗದು ರಹಿತ ಚಿಕಿತ್ಸೆಯನ್ನು ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳಾದ ಸಿ.ಜಿ.ಸತೀಶ್, ಚಂದ್ರಯ್ಯ, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ಮಹಲಿಂಗೇಶ್, ಅನುದಾನಿತ ಕಾಲೇಜು ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಕೆ.ಜಿ.ಕುಮಾರ್, ಪ್ರಾಂಶುಪಾಲರಾದ ರಾಜ್ಕುಮಾರ್, ವಸಂತಕುಮಾರ್, ವೆಂಕಟಾಚಲ, ಜಗದೀಶ್, ಸಿದ್ಧಪ್ಪ, ಕಂಪ್ಲಪ್ಪ, ಗಂಗಹನುಮಯ್ಯ, ಹರೀಶ್, ನಂಜುಂಡಯ್ಯ, ಗೋಪಾಲ್, ಉಪನ್ಯಾಸಕರಾದ ಶ್ರೀವತ್ಸ, ಕೆ.ಎಸ್.ಚಂದ್ರಶೇಖರ್, ಲತಾ, ಅಂಬಿಕಾ, ಪುಷ್ಪಾವತಿ, ಧರ್ಮಾವತಿ, ನಾಗಲಕ್ಷ್ಮಿ, ಉಮಾದೇವಿ, ತಸ್ಲೀಮ್ ಉನ್ನೀಸ್ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.