ಕೊಡಿಗೇನಹಳ್ಳಿ: ಬೆಳೆದ ತರಕಾರಿ ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಂದ ಸುಮಾರು
6.5 ಟನ್ ತರಕಾರಿಯನ್ನು ಕ್ರಿಬ್ಕೊ ನಿರ್ದೇಶಕ ಆರ್.ರಾಜೇಂದ್ರ ಅವರು ಖರೀದಿಸಿದರು. ಅದನ್ನು ಶನಿವಾರ ಐಡಿಹಳ್ಳಿ ಹೋಬಳಿಯ ಜನಕಲೋಟಿ, ತಿಪ್ಪಾಪುರ ಹಾಗೂ ದಾದಗೊಂಡನಹಳ್ಳಿ ಜನರಿಗೆ ವಿತರಿಸಿದರು.
ನಂತರ ಮಾತನಾಡಿದ ರಾಜೇಂದ್ರ ಅವರು, ರೈತರು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಲಾಕ್ಡೌನ್ ಸಂದರ್ಭದಲ್ಲಿ ಮಾರಾಟ ಮಾಡಲು ಆಗದೆ ಕಷ್ಟವಾಗುತ್ತಿದೆ. ತರಕಾರಿಯನ್ನು ಸೂಕ್ತ ಬೆಲೆಗೆ ಖರೀದಿಸಿ ಅದನ್ನು ಬಡ ಜನರಿಗೆ ಹಂಚಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸೂಚನೆ ಮೇರೆಗೆ ತೀರ್ಮಾನಿಸಿದ್ದೇವೆ. ಸದ್ಯ ಖರೀದಿಸಿರುವ ತರಕಾರಿಯನ್ನು 3 ಗ್ರಾಮಗಳಲ್ಲಿ ಪ್ರತಿ ಮನೆಗೆ 5 ಕಿ.ಗ್ರಾಂ ತರಕಾರಿ ನೀಡುತ್ತಿದ್ದೇವೆ ಎಂದರು.
ಲಾಕ್ಡೌನ್ ಮುಗಿಯುವವರಿಗೂ ನಾಗೇಶ್ ಬಾಬು (9880949476), ಎಸ್.ಡಿ. ವೆಂಕಟೇಶ್ (8553339111) ಇವರನ್ನು ಸಂಪ
ರ್ಕಿಸಿದರೆ ಖರೀದಿಸಿದ ತರಕಾರಿಯನ್ನು ತಾಲ್ಲೂಕಿನ ಇತರೆ ಗ್ರಾಮಗಳಿಗೂ ವಿತರಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾದೇನಾನಾಯ್ಕ್ ಮಾತನಾಡಿ, ಗಡಿ ಭಾಗದ ಹಳ್ಳಿಗಳಲ್ಲಿ ರೈತರಿಗೆ ಖರೀದಿ ಹಾಗೂ ಮಾರಾಟಕ್ಕೆ ತೊಂದರೆಯಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ರಾಜಣ್ಣ ಅವರು ರೈತರಿಂದ ಖರೀದಿಸಿದ ತರಕಾರಿಯನ್ನು ನಮ್ಮ ಭಾಗದ ಗ್ರಾಮಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು ಮಾತನಾಡಿದರು. ಕಾಂಗ್ರೆಸ್ ಯುವ ಮುಖಂಡ ಎಸ್.ಡಿ.ವೆಂಕಟೇಶ್, ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಸದಸ್ಯರಾದ ರಾಮಕ್ಕ, ನರಸಿಂಹಯ್ಯ, ಐಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹರೆಡ್ಡಿ, ಮುಖಂಡರಾದ ಪಿ.ಟಿ. ಗೋವಿಂದಪ್ಪ, ಶ್ರೀನಿವಾಸರೆಡ್ಡಿ, ಶನಿವಾರಮರೆಡ್ಡಿ, ನರಸಿಂಹರೆಡ್ಡಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎನ್.ರಾಮಕೃಷ್ಣ, ಸೀತಾರಾಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.