ADVERTISEMENT

ರಾಗಿ ಕಟಾವು ಪ್ರಾರಂಭ: ಬಂಡೆ ಮೇಲೆ ಸಂಸ್ಕರಣೆಗೊಂಡ ರಾಗಿಗೆ ಬೇಡಿಕೆ

ಸಂಸ್ಕರಣೆಗೆ ಹಲವು ಮಾರ್ಗ, ಕೃಷಿ ಕಾರ್ಮಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:01 IST
Last Updated 5 ನವೆಂಬರ್ 2025, 7:01 IST
ತೋವಿನಕೆರೆ ಸಮೀಪದ ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ ಬಂಡೆಹಳ್ಳಿ ಅಡ್ಡ ರಸ್ತೆಯಲ್ಲಿರುವ ಬಂಡೆ ಮೇಲೆ ರಾಗಿ ತೆನೆ 
ತೋವಿನಕೆರೆ ಸಮೀಪದ ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ ಬಂಡೆಹಳ್ಳಿ ಅಡ್ಡ ರಸ್ತೆಯಲ್ಲಿರುವ ಬಂಡೆ ಮೇಲೆ ರಾಗಿ ತೆನೆ    

ತೋವಿನಕೆರೆ: ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ರಾಗಿ ಕಟಾವು ಪ್ರಾರಂಭವಾಗಿದ್ದು, ಸಂಸ್ಕರಣೆಗೆ ನೈಸರ್ಗಿಕ ಬಂಡೆಗಳ ಮೇಲೆ ಖಾಲಿ ಜಾಗಕ್ಕೆ ರೈತರು ಕಾಯುವಂತಾಗಿದೆ.

ಮೊದಲೆಲ್ಲ ಜಮೀನಿನಲ್ಲಿ ಕಣ ಮಾಡಿ ರಾಗಿ ಸಂಸ್ಕರಣೆ ಮಾಡುತ್ತಿದ್ದರು. ನಂತರ ಡಾಂಬರು ರಸ್ತೆಗಳ ಮೇಲೆ ಶುಚಿ ಮಾಡುವ ಪದ್ಧತಿ ಪ್ರಾರಂಭವಾಗಿ ಅಪಘಾತ, ರಸ್ತೆ ದೂಳು, ವಾಹನಗಳ ಟೈರ್‌ ಕಲ್ಮಶ ಮಿಶ್ರಣವಾಗುವಂತಾಯಿತು. ಹರಡಿದ ತೆನೆ ಮೇಲೆ ದ್ವಿಚಕ್ರ ವಾಹನ ಸವಾರರು ಬಿದ್ದು ಸಾವು, ನೋವು ಹೆಚ್ಚಾಯಿತು. ಈ ಬಗ್ಗೆ ಪೊಲೀಸರು ಅರಿವು ಮೂಡಿಸಲಾರಂಭಿಸಿದರು.

ಹಲವು ವರ್ಷಗಳಿಂದ ರಸ್ತೆ ಮೇಲೆ ತೆನೆ ಹಾಕದೆ ನೈಸರ್ಗಿಕ ಬಂಡೆಗಳ ಮೇಲೆ, ಜನ ಓಡಾಡದ ಖಾಲಿ ನಿವೇಶನಗಳ ರಸ್ತೆ ಮೇಲೆ ರಾಗಿ ತೆನೆ ಹರಡಿ ಶುಚಿ ಮಾಡುತ್ತಿದ್ದಾರೆ. ನೈಸರ್ಗಿಕ ಬಂಡೆಗಳ ಮೇಲೆ ಶುಚಿಗೊಂಡ ರಾಗಿಗೆ ಹೆಚ್ಚಿನ ಬೇಡಿಕೆ ಇದ್ದು, ಗ್ರಾಹಕರು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ಕೆಲವು ರೈತರು 50, 30 ಕೆ.ಜಿ ತೂಕದ ಚೀಲ ಮಾಡಿ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ರಾಗಿ ಕಟಾವು ಪ್ರಾರಂಭವಾಗಿರುವುದರಿಂದ ತೆನೆ ಕಟಾವು ಮಾಡಲು ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ದಿನಕ್ಕೆ ಊಟ ತಿಂಡಿ ಕೊಟ್ಟು ₹450- ₹500 ಕೊಡುತ್ತಿದ್ದಾರೆ.

ಶುಚಿಯಾದ ಆಹಾರ ಧಾನ್ಯಗಳನ್ನು ಗ್ರಾಹಕರಿಗೆ ಕೊಡಬೇಕು ಎಂದು ರೈತರಿಗೆ ಅರಿವು ಬಂದಿರುವುದು ಖುಷಿ ವಿಷಯ ಎನ್ನುತ್ತಾರೆ ಕುರಂಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೋನಿಗರಹಳ್ಳಿ ತಿಮ್ಮವ್ವ.

ರಾಗಿ ತೆನೆ ಸಂಸ್ಕರಣೆ 

ಬಂಡೆ ಮೇಲೆ ಒಡೆದ ಬಾಟಲ್‌

ಬಂಡೆಗಳ ಮೇಲೆ ರಾಗಿ ತೆನೆಗಳನ್ನು ಚೆನ್ನಾಗಿ ಒಣಗಿಸಿ ಶುಚಿ ಮಾಡುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವು ವರ್ಷಗಳಿಂದ ಬಂಡೆಯ ಮೇಲೆ ಮದ್ಯಪಾನ ಮಾಡುವವರು ಕುಡಿದು ಖಾಲಿ ಬಾಟಲಿಗಳನ್ನು ಒಡೆದು ಚೂರು ಮಾಡುತ್ತಿದ್ದಾರೆ. ಬಂಡೆ ಮೇಲೆ ಟಾರ್‌ಪಲ್‌ಗಳನ್ನು ಹಾಕಿ ಅದರ ಮೇಲೆ ತೆನೆ ಹರಡುತ್ತಿದ್ದೇವೆ ಎಂದು ರೈತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.