ADVERTISEMENT

ರಾಮಯ್ಯಗೆ ‘ಮಧುರಚೆನ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 4:34 IST
Last Updated 28 ನವೆಂಬರ್ 2020, 4:34 IST
ತುಮಕೂರು ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೋಬಾನೆ ರಾಮಯ್ಯ ಅವರಿಗೆ ‘ಮಧುರಚೆನ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ತುಮಕೂರು ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೋಬಾನೆ ರಾಮಯ್ಯ ಅವರಿಗೆ ‘ಮಧುರಚೆನ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ತುಮಕೂರು: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮಧುರಚೆನ್ನ’ ಪ್ರಶಸ್ತಿಯನ್ನು ಕುಣಿಗಲ್‌ನ ಸೋಬಾನೆ ರಾಮಯ್ಯ ಅವರಿಗೆ ಪ್ರದಾನ ಮಾಡಲಾಯಿತು.

ಕೆ.ಸಿ.ಕಾಂತಪ್ಪ ದತ್ತಿನಿಧಿಯಿಂದ ₹5 ಸಾವಿರ ನಗದು, ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.

ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಹಲಸಂಗಿ ಮಾತನಾಡಿ, ‘ಗೆಳೆಯರಲ್ಲಿ ಮಧುರಚೆನ್ನರದು ಅದ್ವಿತೀಯ ಕೊಡುಗೆ. ಕನ್ನಡದ ಮೊದಲ ಜನಪದ ಗೀತ ಸಂಕಲನ ‘ಗರತಿಯ ಹಾಡು’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಇವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡುವುದರ ಮೂಲಕ ಪರಿಷತ್ ಹೊಸ ಪರಂಪರೆಯನ್ನು ಹುಟ್ಟುಹಾಕಿದೆ’ ಎಂದರು.

ADVERTISEMENT

ರಾಮನಗರ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ.ಸಿ.ಕಾಂತಪ್ಪ, ‘ಕನ್ನಡ ನಾಡಿನಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜನಪದ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೋಬಾನೆ ರಾಮಯ್ಯ, ‘ಸರ್ಕಾರ ಗಮನಿಸದ ನನ್ನಂತಹವರನ್ನು ಡಾ.ಎಸ್.ಬಾಲಾಜಿ ಅವರು ಕನ್ನಡ ಜಾನಪದ ಪರಿಷತ್ ಮೂಲಕ ಗುರುತಿಸಿ ಗೌರವಿಸುತ್ತಿರುವುದು ಸಂತೋಷ ತಂದಿದೆ. ಇಂದಿನ ಪೀಳಿಗೆಯ ಮಕ್ಕಳು ಜನಪದದ ಬಗ್ಗೆ ಆಸಕ್ತಿಯನ್ನು ತೋರುತ್ತಿಲ್ಲ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಎಸ್.ಕುಮಾರ್, ‘ಜನಪದ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಪರಿಷತ್ ಉತ್ತಮ ಕಾರ್ಯನಿರ್ವಹಿಸುತ್ತಿದೆ’ ಎಂದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಶ್ರೀನಿವಾಸಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯಭಾಸ್ಕರ್, ಪ್ರೊ.ಸಿ.ನಂದೀಶ, ಪ್ರೊ.ರಮೇಶ ಮಣ್ಣೆ, ಪ್ರೊ.ಎಸ್.ಎಸ್.ಆರಾಧ್ಯ, ಡಾ.ಡಿ.ಆರ್.ಅನಂತಕುಮಾರ್, ಡಾ.ಎಂ.ಆರ್.ರಂಗಸ್ವಾಮಿ, ಮದನ್ ಮೋಹನ್, ಸೈಯದ್ ಬಾಬು, ಬಿ.ಆರ್.ರಾಧಿಕ, ಆಶಾ, ಶಿವರಂಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.