ತುಮಕೂರು: ಕೊಬ್ಬರಿ, ತೆಂಗಿನಕಾಯಿ, ಎಳನೀರು ದುಬಾರಿಯಾದಂತೆ ತೆಂಗಿನ ಕಾಯಿ ಚಿಪ್ಪುಗೆ (ಕೊಬ್ಬರಿ ಕಂಟ) ದಾಖಲೆ ಬೆಲೆ ಸಿಗುತ್ತಿದೆ. ಒಂದು ಟನ್ ಚಿಪ್ಪು ₹26,500ರ ವರೆಗೂ ಮಾರಾಟವಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಟನ್ಗೆ ₹7 ಸಾವಿರದಿಂದ ₹8 ಸಾವಿರದವರೆಗೂ ಸಿಗುತಿತ್ತು. ಎರಡು ವರ್ಷd ಹಿಂದೆ ಟನ್ ₹18 ಸಾವಿರಕ್ಕೆ ಹೆಚ್ಚಳವಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ, ಈ ಬಾರಿ ಹೊಸ ದಾಖಲೆ ಬರೆದಿದೆ.
ಬೇಡಿಕೆಯಷ್ಟು ಚಿಪ್ಪು ಸಿಗದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರು ತೆಂಗಿನ ಕಾಯಿ, ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು, ಚಿಪ್ಪಿನ ಕೊರತೆ ಎದುರಾಗಿದೆ.
‘ಒಂದು ವರ್ಷದ ಅಂತರದಲ್ಲಿ ನಾಲ್ಕು ಪಟ್ಟು ದರ ಹೆಚ್ಚಳವಾಗಿದೆ. ಚಿಪ್ಪಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಬಹುದು’ ಎಂದು ವರ್ತಕ ಸೋಮಶೇಖರ್ ಹೇಳುತ್ತಾರೆ.
ರಾಜ್ಯದ ಇದ್ದಲಿಗೆ ಬೇಡಿಕೆ: ತೆಂಗು ಬೆಳೆಯುವ ತಮಿಳುನಾಡು, ಕೇರಳ ರಾಜ್ಯದಲ್ಲೂ ಚಿಪ್ಪಿನ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದ ಚಿಪ್ಪಿಗೆ ಬೇಡಿಕೆ ಬಂದಿದೆ. ಹೊರ ರಾಜ್ಯದ ಇದ್ದಿಲಿನಲ್ಲಿ ಕಾರ್ಬನ್ ಪ್ರಮಾಣ ಶೇ 80ಕ್ಕಿಂತ ಕಡಿಮೆ ಇರುತ್ತದೆ.
ರಾಜ್ಯದ ಚಿಪ್ಪಿನಿಂದ ತಯಾರಿಸಿದ ಇದ್ದಿಲಿನಲ್ಲಿ ಕಾರ್ಬನ್ ಅಂಶ ಶೇ 85ರಿಂದ 95ರ ವರೆಗೂ ಇರುತ್ತದೆ. ಹಾಗಾಗಿ ರಾಜ್ಯದ ಇದ್ದಿಲಿಗೆ ಹೆಚ್ಚು ಬೆಲೆ ಸಿಗುತ್ತದೆ. ‘ಕಾಯಿ ಚಿಪ್ಪು ತಂದು ಕೊಡಿ, ಹಣ ಗಳಿಸಿ’ ಎಂಬ ಅಭಿಯಾನವೂ ಜಿಲ್ಲೆಯಲ್ಲಿ ನಡೆದಿದೆ. ಅಷ್ಟರ ಮಟ್ಟಿಗೆ ಬೇಡಿಕೆ ಕಂಡುಕೊಂಡಿದೆ.
ಹೊರ ರಾಜ್ಯಕ್ಕೆ: ಸ್ಥಳೀಯವಾಗಿ ಖರೀದಿಸಿದ ಚಿಪ್ಪನ್ನು ಸುಟ್ಟು ಇದ್ದಿಲು ಮಾಡುತ್ತಾರೆ. ನಂತರ ಕೇರಳ, ತಮಿಳುನಾಡಿನ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ರಾಜಸ್ಥಾನ, ಗುಜರಾತ್ ಕಾರ್ಖಾನೆಗಳಿಂದಲೂ ಬೇಡಿಕೆ ಬರುತ್ತಿದೆ. ಕಾರ್ಖಾನೆಗಳಲ್ಲಿ ಇದ್ದಿಲನ್ನು ಚೆನ್ನಾಗಿ ತೊಳೆದು, ಒಣಗಿಸಿ, ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಲಾಗುತ್ತದೆ. ನಂತರ ಪ್ಯಾಕ್ ಮಾಡಿ ರಫ್ತು ಮಾಡಲಾಗುತ್ತದೆ.
ಪ್ರಮುಖವಾಗಿ ಕಾರ್ಬನ್ ತಯಾರಿಕೆ ವಲಯದಲ್ಲಿ ಇದ್ದಿಲು ಬಳಸಲಾಗುತ್ತಿದೆ. ಸೌಂದರ್ಯವರ್ಧಕ ತಯಾರಿಕೆ, ಮುಖದ ಕ್ರೀಮ್, ವಾಟರ್ ಪೇಂಟ್ ತಯಾರಿಕೆಗೂ ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.