ಕುಣಿಗಲ್: ತಾಲ್ಲೂಕಿನ ಪಾಲಿನ ಮೂರು ಟಿಎಂಸಿ ಹೇಮಾವತಿ ನೀರಿಗಾಗಿ ತಾಲ್ಲೂಕಿನ ವಿವಿಧ ಮಠಾಧೀಶರು ಮಂಗಳವಾರ ಸಭೆ ಸೇರಿ ಹಕ್ಕೋತ್ತಾಯ ನಿರ್ಣಯ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಕುಣಿಗಲ್ ತಾಲ್ಲೂಕಿನ ಜನಪ್ರನಿಧಿಗಳ ಪಾತ್ರ ಹೆಚ್ಚು. ಹೋರಾಟಗಳು ಪ್ರಾರಂಭವಾದ ದಿನಗಳಲ್ಲಿ ಲೇವಡಿ ಮಾಡಿದ್ದ ಜಿಲ್ಲೆಯ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಮತ್ತು ಮುಖಂಡರು ನೀರು ಬಂದಾಗ ತಮ್ಮ ಭಾಗಕ್ಕೆ ಹರಿಸಿಕೊಂಡು ಮೂಲ ಉದ್ದೇಶದ ಕುಣಿಗಲ್ ತಾಲ್ಲೂಕಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಕುಣಿಗಲ್ ತಾಲ್ಲೂಕಿಗೆ ನಿಗದಿಯಾಗಿರುವ ಮೂರು ಟಿ.ಎಂಸಿ ನೀರು ಇದುವರೆಗೂ ಹರಿದಿಲ್ಲ ಎಂದು ಗೃಹಸಚಿವರೆ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದಾರೆ. ನೇರವಾಗಿ ನೀರನ್ನು ಪಡೆಯುವ ಉದ್ದೇಶದಿಂದ ಲಿಂಕ್ ಕೆನಾಲ್ ಪ್ರಾರಂಭವಾಗಿದೆ. ಈ ಯೋಜನೆಯಿಂದ ತಾಲ್ಲೂಕಿನ ಎಲ್ಲ ಹೋಬಳಿಗಳ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಯಾರಿಗೂ ಅನ್ಯಾಯವಾಗದೆ ನಮ್ಮ ಪಾಲಿನ ನೀರು ಪಡೆಯಲು ಹೋರಾಟಗಳು ನಡೆಯುತ್ತಿವೆ. ಜಿಲ್ಲೆಯ ರೈತರು ಅರ್ಥಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹುಲಿಯೂರುದುರ್ಗ ಸಿದ್ಧಗಂಗಾ ಮಠದ ಸಿದ್ದಲಿಂಗ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಸದಾಶಿವಾ ಶಿವಾಚಾರ್ಯ, ಭದ್ರಗಿರಿ ಮಠಧ ವೀರಭದ್ರ ಶಿವನಾಂದ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.