ಮಧುಗಿರಿ: ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಕೆಲವು ಕಂದಾಯ ತನಿಖಾಧಿಕಾರಿಗಳು ಕಡತಗಳನ್ನು ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಗರ್ ಹುಕುಂ ಕಮಿಟಿ ಸದಸ್ಯರು ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಪಟ್ಟಣದಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಶಾಸಕ ಎಂ.ವಿ. ವೀರಭದ್ರಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ತಾಲ್ಲೂಕಿನ ಐ.ಡಿ. ಹಳ್ಳಿ, ಕೊಡಿಗೇನಹಳ್ಳಿ, ಮಿಡಿಗೇಶಿ ಹೋಬಳಿಯ ಕಂದಾಯ ತನಿಖಾಧಿಕಾರಿಗಳು ಪ್ರತಿ ಸಭೆಗೆ ತಲಾ ನೂರು ಕಡತಗಳನ್ನು ಮಂಡಿಸಬೇಕು ಎಂದು ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಕಡತಗಳನ್ನು ಮಂಡಿಸದ ಕಾರಣ ಅರ್ಹ ಫಲಾನುಭವಿಗಳಿಗೆ ಸಾಕಷ್ಟು ತೊಂದರೆಗಳಾಗಿದೆ ಎಂದು ದೂರಿದರು.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಕೆಲವು ಸಾಗುವಳಿ ಪತ್ರಗಳು ನೀಡಿದ್ದರೂ ಈವರೆಗೂ
ಖಾತೆ, ಪಹಣಿ ಮಾಡಿಲ್ಲ. ಫಲಾನುಭವಿಗಳ ಬಳಿ ಹಣ ಪಡೆದರೂ ಸಾಗುವಳಿ ಚೀಟಿ ನೀಡಿಲ್ಲ. ಕೆಲವೆಡೆ ಸುಳ್ಳು ಸಾಗುವಳಿ ಚೀಟಿ ನೀಡಿ ವಂಚನೆ ಎಸಗಿದ್ದಾರೆ. ಇದಕ್ಕೆಲ್ಲ ಕಾರಣರಾದವರನ್ನು ಪತ್ತೆಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸದಸ್ಯರಾದ ಜೆ.ಎಚ್. ನಾರಾಯಣ್, ಪ್ರಸನ್ನ ಕುಮಾರ್, ಉಮಾದೇವಿ, ಗ್ರಾಮಸ್ಥರಾದ ಚೌಡಪ್ಪ, ಶಿವಣ್ಣ, ರಮೇಶ್, ತಿರುಮಲೇಶ್, ನಾಗರಾಜಪ್ಪ, ಜೈರಾಮ್, ತಿಪ್ಪೇಸ್ವಾಮಿ, ರಾಜಣ್ಣ, ನಾಗರಾಜಪ್ಪ, ಮುತ್ತುರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.