– ನಾಗೇಂದ್ರಪ್ಪ ಕೆ.ಎನ್.
ಚಿಕ್ಕನಾಯಕನಹಳ್ಳಿ: ಅನುದಾನದ ಕೊರತೆ, ನಿರ್ವಹಣೆಯ ವೈಫಲ್ಯದಿಂದಾಗಿ ತಾಲ್ಲೂಕಿನ ಮೇಲನಹಳ್ಳಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ.
ಶಾಲೆಯ ಕಟ್ಟಡಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಬೋಧನಾ ಕೊಠಡಿ, ಹಾಸ್ಟೆಲ್ ಕೊಠಡಿ, ಡೈನಿಂಗ್ ಹಾಲ್, ಶೌಚಾಲಯ, ಸ್ನಾನದ ಗೃಹ ಎಲ್ಲವುಗಳಲ್ಲಿ ನೀರು ತೊಟ್ಟಿಕ್ಕುತ್ತಿದೆ.
ಮಳೆ ನಿಂತರು ಹನಿ ನಿಲ್ಲದು ಎನ್ನುವಂತೆ ಕಟ್ಟಡದಲ್ಲಿ ಬಹುದಿನದವರೆಗೂ ನೀರು ಸೋರುತ್ತಲೇ ಇರುತ್ತದೆ. ಅಷ್ಟೊತ್ತಿಗೆ ಇನ್ನೊಂದು ಮಳೆ ಸುರಿದರೆ ಸಮಸ್ಯೆ ಪುನರಾವರ್ತನೆಯಾಗುತ್ತದೆ. ಮಳೆಗಾಲ ಮುಗಿಯುವ ತನಕ ವಿದ್ಯಾರ್ಥಿಗಳ ಗೋಳು ತಪ್ಪುವುದೇ ಇಲ್ಲ.
₹4.5 ಕೋಟಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣಗೊಂಡ ಕಟ್ಟಡವಾದರೂ ಈಗಾಗಲೇ ದುಸ್ಥಿತಿ ತಲುಪಿದೆ. ಗೋಡೆಗಳ ಮಧ್ಯದಲ್ಲೇ ನೀರು ಜಿನುಗಿ ಕೆಳ ಮಹಡಿವರೆಗೂ ವ್ಯಾಪಿಸುತ್ತಿದೆ.
ಕಟ್ಟಡದಲ್ಲಿ ಸಮಸ್ಯೆ ಶುರುವಾದಾಗಿನಿಂದಲೂ ದುರಸ್ತಿಗೆ ಪ್ರತಿವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ಶಾಲೆಯಲ್ಲಿ ಬಾಲಕ, ಬಾಲಕಿಯರ ನಿವಾಸಕ್ಕೆ ತಲಾ 10 ಕೊಠಡಿ, ತಲಾ 12 ಶೌಚ, ಸ್ನಾನ ಗೃಹಗಳಿವೆ ಎಲ್ಲವುಗಳದ್ದೂ ಇದೇ ಸಮಸ್ಯೆ. ವಿಪರೀತವಾಗಿ ಸೋರುವ ಎರಡು ಕೊಠಡಿಗಳ ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ.
ಬಿಸಿನೀರಿನ ವ್ಯವಸ್ಥೆಗೆ ಕಟ್ಟಡದ ಮೇಲೆ ಅಳವಡಿಸಿದ್ದ ಸೋಲಾರ್ ಉಪಕರಣಗಳು ಹಾಳಾಗಿ ಹಲವು ವರ್ಷ ಕಳೆದಿದ್ದರೂ ಸರಿಪಡಿಸಿಲ್ಲ. ನಿರ್ವಹಣಾ ವೆಚ್ಚಕ್ಕೆಂದು ವಾರ್ಷಿಕ ₹1 ಲಕ್ಷ ಅನುದಾನ ಬರುತ್ತದೆಯಾದರೂ, ಮತ್ತೆ, ಮತ್ತೆ ಕೆಟ್ಟು ಹೋಗುವ ಕೊಳವೆಬಾವಿ ಪಂಪ್ಸೆಟ್ ದುರಸ್ತಿಗೆ ಆ ಹಣ ಸಾಕಾಗುವುದಿಲ್ಲ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.