ತುಮಕೂರು: ‘ನದಿ ಜೋಡಣೆಯಿಂದ ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ' ಎಂದು ಸಂಸದ ಜಿ.ಎಸ್.ಬಸವರಾಜ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಯಡಿ ದಕ್ಷಿಣ ಭಾರತ ನದಿ ಜೋಡಣೆ ಯೋಜನೆಯೂ ರೂಪುಗೊಳ್ಳುತ್ತಿದೆ. ಮುಖ್ಯಮಂತ್ರಿಯವರು ಸರ್ವ ಪಕ್ಷಗಳ ಸಭೆ, ರಾಜ್ಯದ ಸಂಸದರ ಸಭೆ ಕರೆಯಬೇಕು. ನೀರಾವರಿಗಾಗಿಯೇ ವಿಶೇಷ ಅಧಿವೇಶನ ನಡೆಸಬೇಕು’ ಎಂದು ಒತ್ತಾಯ ಮಾಡಿದರು.
'ಊರಿಗೊಂದು ಕೆರೆ - ಆ ಕೆರೆಗೆ ನದಿ ನೀರು' ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಬೇಕು. ಕೇಂದ್ರ ಜಲಶಕ್ತಿ ಸಚಿವಾಲಯದ ಸಚಿವ ಗಜೇಂದ್ರ ಶೇಖಾವತ್ ಅವರನ್ನು ತುಮಕೂರಿಗೆ ಕರೆಸಿ ನೀರಾವರಿ ಯೋಜನೆ ಜಾರಿಗೆ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ನೀರಾವರಿ ತಜ್ಞರ ಸಭೆ ನಡೆಸಲು ಉದ್ದೇಶಿಸಲಾಗಿದೆ’ ಎಂದರು.
ಒದ್ದು ಕೆಲಸ ಮಾಡಿಸ್ತಾರೆ: ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಈಚೆಗೆ ನೀಡಿದ್ದ ಸಂಸದ ಬಸವರಾಜ್ ಜಿಲ್ಲೆಗೆ ಹೇಗೆ ನೀರು ತರುತ್ತಾರೊ ತರಲಿ. ನೋಡೋಣ ಎಂಬ ಹೇಳಿಕೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ’ನ್ಯಾಯಾಧೀಕರಣವು ಸಮಿತಿ ರಚನೆ ಮಾಡಿದ್ದು, ಅದು ಒದ್ದು ಕೆಲಸ ಮಾಡಿಸುತ್ತದೆ, ಜಿಲ್ಲೆಗೆ ನೀರು ಬಿಡಿಸುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.