ADVERTISEMENT

ಆರು ಮಂದಿ ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:54 IST
Last Updated 28 ಜನವರಿ 2020, 13:54 IST

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಹಳ್ಳಿ-ದೊಡ್ಡತಿಮ್ಮಯ್ಯನಪಾಳ್ಯ ರಸ್ತೆಯಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನಪ್ಪನಪಾಳ್ಯದ ಕೆ.ಎಂ.ಜೀವನ್ (19), ಶಿರಾ ತಾಲ್ಲೂಕು ಗೋಣಿಹಳ್ಳಿಯ ಮಂಜುನಾಥ್ (19), ನೆಲಮಂಗಲ ತಾಲ್ಲೂಕು ಕೊಟ್ಟನಹಳ್ಳಿಯ ರಾಘವೇಂದ್ರ (20), ಮಡಕಶಿರಾ ತಾಲ್ಲೂಕು ಕಸಾಪುರದ ಪ್ರೀತಂ (19), ಪಾವಗಡ ತಾಲ್ಲೂಕು ಸಿ.ಕೆ.ಪುರದ ಸಂಜಯ್ ಕುಮಾರ್ (19), ಹಿರಿಯೂರು ತಾಲ್ಲೂಕು ಗೌಡನಹಳ್ಳಿಯ ತಿಪ್ಪೇಸ್ವಾಮಿ (20) ಬಂಧಿತರು.

ಈ ಆರು ಮಂದಿ ಜ.21ರಂದು ಆಟೊದಲ್ಲಿ ರಾಡ್, ಚಾಕು, ದೊಣ್ಣೆಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುವ ಒಬ್ಬಂಟಿಗರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಆರೋಪಿತರಿಂದ ₹ 2.5 ಲಕ್ಷ ಬೆಲೆಬಾಳುವ ಆಭರಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಜೀವನ್, ಮಂಜುನಾಥ್, ರಾಘವೇಂದ್ರ ಮತ್ತು ಪ್ರೀತಂ ಬಸ್ತಿಬೆಟ್ಟದ ಗೊಮ್ಮಟೇಶ್ವರ ದೇವಾಲಯದ ಹುಂಡಿಯ ಕಳ್ಳತನ, ಪಂಡಿತನಹಳ್ಳಿ ಗ್ರಾಮದಲ್ಲಿ ಬೈಕ್‌ ಕಳ್ಳತನ ಮಾಡಿದ್ದರು. ಬಸದಿ ಬೆಟ್ಟದಲ್ಲಿ ಪ್ರೇಮಿಗಳನ್ನು ಹೆದರಿಸಿ ಆಭರಣ, ಹಣ ಮತ್ತು ಮೊಬೈಲ್ ದೋಚಿದ್ದರು.

ಸಿಪಿಐ ಶ್ರೀಧರ್, ಪಿಎಸ್‌ಐ ರಾಮಪ್ರಸಾದ್, ಎಎಸ್‌ಐ ಗುರುಮಲ್ಲಾರಾಧ್ಯ, ಸಿದ್ದಪ್ಪ ಹಾಗೂ ಸಿಬ್ಬಂದಿ ಮೋಹನ್ ಕುಮಾರ್, ರಮೇಶ, ಮನು, ಸೈಯದ್ ರಿಫತ್ ಅಲಿ, ಮಂಜುನಾಥ ರಮೇಶ್‌‌ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.