ADVERTISEMENT

ನಾಲೆಗೆ ಬಂಡೆ ಹಾಕಿ; ತುಮಕೂರು ನೀರಿಗೆ ತಡೆ

ಬಾಗೂರು ನವಿಲೆ ಸಮೀಪ ಹೇಮಾವತಿ ನಾಲೆ ವೀಕ್ಷಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 15:39 IST
Last Updated 7 ಜುಲೈ 2019, 15:39 IST
ಬಾಗೂರು ನವಿಲೆ  ಏತ ನೀರಾವರಿ ಸುರಂಗ ಮಾರ್ಗವನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಭಾನುವಾರ ವೀಕ್ಷಣೆ ಮಾಡಿದರು
ಬಾಗೂರು ನವಿಲೆ  ಏತ ನೀರಾವರಿ ಸುರಂಗ ಮಾರ್ಗವನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಭಾನುವಾರ ವೀಕ್ಷಣೆ ಮಾಡಿದರು   

ತುಮಕೂರು: ಹೇಮಾವತಿ ನಾಲೆಗೆ ಬಂಡೆಗಳನ್ನು ಹಾಕಿ ತುಮಕೂರು ಜಿಲ್ಲೆಗೆ ಹರಿಯುವ ನೀರಿಗೆ ತಡೆಯೊಡ್ಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಬಾಗೂರು ನವಿಲೆ ಬಳಿ ಸುರಂಗ ಮಾರ್ಗದಲ್ಲಿ ನಾಲೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ 25 ಟಿ.ಎಂ.ಸಿ. ನೀರು ಹರಿಸುವಂತೆ ನಿಗದಿಪಡಿಸಲಾಗಿದೆ. ಆದರೆ, ಇದುವರೆವಿಗೂ 25 ಟಿ.ಎಂ.ಸಿ.ನೀರು ಹರಿದಿಲ್ಲ. ಬದಲಾಗಿ, ನಾಲೆಗೆ ಬಂಡೆಗಳನ್ನು ಹಾಕಿ ಹರಿಯುವ ನೀರನ್ನು ತಡೆಗಟ್ಟುವ ಕೆಲಸ ನಡೆಯುತ್ತಿದೆ. ನಾಲೆಗೆ ಬಂಡೆ ಹಾಕುವವರು ಯಾರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ’ ಎಂದರು.

'ತುಮಕೂರು ಜಿಲ್ಲೆಯ ಜನ ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರೂ ಸಹ ನಿಗದಿಯಾಗಿರುವ ನೀರು ಹರಿಸಲು ಅಡ್ಡಿಪಡಿಸುತ್ತಿರುವುದರಿಂದ ಈ ಭಾಗದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಇದನ್ನು ಮನಗಂಡು ನಾನು ಖುದ್ಧ ಸ್ಥಳ ಪರಿಶೀಲನೆ ನಡೆಸಲು ಬಂದಿದ್ದೇನೆ' ಎಂದರು.

ADVERTISEMENT

'ಹೇಮಾವತಿ ನಾಲೆ ಆಧುನೀಕರಣಗೊಳಿಸುವ ಜಿಲ್ಲೆಗೆ ನಿಗದಿಪಡಿಸಿರುವ 25 ಟಿಎಂಸಿ ಅಡಿ ನೀರನ್ನು ಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು' ಎಂದು ಸೂಚನೆ ನೀಡಿದರು.

‘ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿಗೆ ಮಂಜೂರಾಗಿರುವ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡಿಸಿ ಮುಂದಿನ ವರ್ಷದಿಂದಲಾದರೂ ನೀರು ಹರಿಯಲು ಯಾವುದೇ ರೀತಿ. ತೊಂದರೆಯಾಗದಂತೆ ನೋಡಿಕೊಳ್ಳಲು ಸಂಸದರು ಮತ್ತು ಶಾಸಕರಿಗೆ ತಿಳಿಸಿದ್ದೇನೆ’ ಎಂದರು.

’ಈಗಾಗಲೇ ಹೇಮಾವತಿ ನಾಲೆಯ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನೊಮ್ಮೆ ನಾಲಾ ವೀಕ್ಷಣೆಗೆ ಬಂದು ಅಧಿಕಾರಿಗಳೊಂದಿಗೆ ಅರ್ಧ ದಿನ ಇಲ್ಲೇ ಇದ್ದು, ಸುದೀರ್ಘವಾಗಿ ಚರ್ಚಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೆಲಸ ಮಾಡುತ್ತೇನೆ’ ಎಂದರು.

’ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗೆ ಇನ್ನು ಹೆಚ್ಚಿನ ಹಣದ ಅಗತ್ಯವಿದ್ದರೆ ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಸಾವಿರಾರು ಕೋಟಿ ಖರ್ಚು ಮಾಡಿದರೂ ಸಹ ಜನರಿಗೆ ನೀರಿಲ್ಲದೆ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದಾದರೂ ಸರ್ಕಾರದ ಹಣ ದುರುಪಯೋಗವಾಗದೇ ಸದುಪಯೋಗವಾಗಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು’ ಎಂದರು.

ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಪ್ರೀತಂಗೌಡ, ಮಸಾಲೆ ಜಯರಾಮ್, ಬಿ.ಸಿ.ನಾಗೇಶ್, ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಶಾಸಕ ಬಿ.ಸುರೇಶ್‌ಗೌಡ,ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾರದಾ ನರಸಿಂಹಮೂರ್ತಿ, ಎಸ್.ಶಿವಪ್ರಸಾದ್, ಹೆಬ್ಬಾಕ ರವಿಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.