ADVERTISEMENT

ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸರ್; ಎಸ್‌ಐಟಿ ವಿದ್ಯಾರ್ಥಿ ಚಿದಾನಂದ್ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 20:36 IST
Last Updated 26 ಜುಲೈ 2020, 20:36 IST
ಕಲ್ಪಶುದ್ಧಿ ಸ್ಯಾನಿಟೈಸರ್‌ನೊಂದಿಗೆ ಚಿದಾನಂದ್
ಕಲ್ಪಶುದ್ಧಿ ಸ್ಯಾನಿಟೈಸರ್‌ನೊಂದಿಗೆ ಚಿದಾನಂದ್   

ತುಮಕೂರು: ನಗರದ ಎಸ್‌ಐಟಿ ವಿದ್ಯಾರ್ಥಿ ಎಚ್‌.ಎನ್.ಚಿದಾನಂದ್ ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸರ್ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ‘ಕಲ್ಪಶುದ್ಧಿ’ ಹೆಸರಿನ ಸ್ಯಾನಿಟೈಸರ್ ಜನರಿಗೆ ತಲುಪಲಿದೆ.

ಎಸ್‌ಐಟಿಯಲ್ಲಿ ಜೈವಿಕ ತಂತ್ರಜ್ಞಾನ ವ್ಯಾಸಂಗ ಪೂರ್ಣಗೊಳಿಸಿರುವ ಚಿದಾನಂದ್, ಕಡಿಮೆ ವೆಚ್ಚದಲ್ಲಿ ಸೋಂಕು ನಿವಾರಕ ಸುರಂಗಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿದ್ದರು. ನಗರದ ಅಂತರಸನಹಳ್ಳಿ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಅವರು ಸೋಂಕು ನಿವಾರಕ ಸುರಂಗ (ಟನಲ್) ನಿರ್ಮಿಸಿದ್ದರು.

ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸ್ ರೂಪಿಸಿದ್ದಾರೆ. ಈ ಸ್ಯಾನಿಟೈಸರ್‌ಗೆ ‘ಕಲ್ಪಶುದ್ಧಿ’ ಎನ್ನುವ ಹೆಸರು ಇಟ್ಟಿದ್ದಾರೆ. ಮಾರುಕಟ್ಟೆಗೆ ಬಿಡುಗಡೆಗೊಳಿಸುವ ದಿಕ್ಕಿನಲ್ಲಿ ಅಡಿ ಇಟ್ಟಿದ್ದು, ಅನುಮತಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಪೇಟೆಂಟ್ ಪಡೆಯುವ ದಿಕ್ಕಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ.

ADVERTISEMENT

‘ತೆಂಗಿನ ಎಣ್ಣೆಯಲ್ಲಿ ಲೌರಿಕ್ (ಲಾರಿಕ್) ಆ್ಯಸಿಡ್ ಅಂಶ ಇರುತ್ತದೆ. ಇದು ಕೊರೊನಾ ಸೋಂಕಿನ ಲಿಪಿಡ್ ಲೆಯರ್ ನಾಶಗೊಳಿಸುತ್ತದೆ. ಸಾಮಾನ್ಯವಾಗಿ ಕೊರೊನಾ ಸೇರಿದಂತೆ ಬಹುತೇಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಲ್ಲಿ ಲಿಪಿಡ್ ಲೆಯರ್ ಇರುತ್ತದೆ. ಕೊರೊನಾ ಸೋಂಕಿನಲ್ಲಿ ಈ ಲಿಪಿಡ್ ಲೆಯರ್ ಇದೆ. ಇದನ್ನು ಲಾರಿಕ್ ಆ್ಯಸಿಡ್ ನಾಶ ಮಾಡುತ್ತದೆ’ ಎಂದು ಚಿದಾನಂದ್ ವಿವರಿಸಿದರು.

‘ತೆಂಗಿನ ಎಣ್ಣೆಗೆ ಶೇ 70ರಷ್ಟು ಆಲ್ಕೊಹಾಲ್ ಮತ್ತು ಲೆಮನ್ ಆಯಿಲ್ ಸೇರಿಸಿ ಸ್ಯಾನಿಟೈಸ್ ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಆಯುಷ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಯುತ್ತಿದೆ. ಅವರು ಇದನ್ನು ಸಂಶೋಧನೆಗೂ ಒಳಪಡಿಸಬಹುದು. ಆ ಪ್ರಕ್ರಿಯೆಗಳು ಮುಗಿದ ಮೇಲೆ ಬಿಡುಗಡೆ ಮಾಡುತ್ತೇನೆ’ ಎಂದರು.

‘ಸರ್ಕಾರ ನಿಗದಿಪಡಿಸಿರುವ 100 ಎಂಎಲ್ ಸ್ಯಾನಿಟೈಸರ್‌ಗೆ ₹ 50ರಂತೆ ದರ ನಿಗದಿಪಡಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಈ ಮೂಲಕ ತೆಂಗಿಗೂ ಮತ್ತಷ್ಟು ಬೆಲೆ ಬರುವ ಸಾಧ್ಯತೆ ಇದೆ’ ಎಂದರು. ಸಿದ್ಧಗಂಗಾ ಮಠದ ಪ್ರವೇಶ ದ್ವಾರದಲ್ಲಿ ರೂಪಿಸಿರುವ ‘ಕಲ್ಪಶುದ್ಧಿ ಸ್ಯಾನಿಟರಿ ಗೇಟ್ ವೇ’ ರೂವಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.