ತಿಪಟೂರು: ‘ಸಾವಿತ್ರಿಬಾಯಿ ಫುಲೆ ದೇಶದಲ್ಲಿ ಮೊಟ್ಟಮೊದಲಿಗೆ ಪ್ರತ್ಯೇಕವಾಗಿ ಹೆಣ್ಣುಮಕ್ಕಳಿಗೆ ಶಾಲೆ ಪ್ರಾರಂಭಿಸಿ ಸಮಾಜಕ್ಕೆ ದಾರಿದೀಪವಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ ತಿಳಿಸಿದರು.
ನಗರದ ನಿವೃತ್ತ ನೌಕರರ ಸಂಘದ ಕಟ್ಟಡದಲ್ಲಿ ಸಾವಿತ್ರಿಬಾಯಿ ಫುಲೆ ಸಂಘದಿಂದ ನಡೆದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನೋತ್ಸವದಲ್ಲಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಭಾರತದ ಪ್ರಥಮ ಶಿಕ್ಷಕಿ ಮಾತ್ರವಲ್ಲ, ವಿಶ್ವದಲ್ಲಿ ಗಮನ ಸೆಳೆದ ಸಾಧಕಿಯಾಗಿದ್ದಾರೆ. ಮಹಿಳೆಯರ ಉದ್ಧಾರಕ್ಕಾಗಿ ತಮ್ಮ ಜೀವನ, ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದರು.
ಮಹಿಳೆಯರ ಪರವಾಗಿ ಹಲವು ಹೋರಾಟಗಳನ್ನು ಮಾಡಿ ಅವರಿಗೆ ನ್ಯಾಯ ಸಮ್ಮತವಾದ ಗೌರವ ಸಿಗುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಹಿಳೆಯರಿಗೆ, ಶೋಷಿತರಿಗೆ ನಿಷೇಧಿಸಿದ ಶಿಕ್ಷಣ ಹಕ್ಕನ್ನು ಅಂದಿನ ಕಾಲದಲ್ಲಿಯೇ ಎಲ್ಲರ ವಿರೋಧದ ನಡುವೆಯೇ ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆ ಪ್ರಾರಂಭಿಸಿ ಕಲಿಯುವಂತೆ ಮಾಡಿದರು. ಇಂತವರ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರೆ ಸ್ಫೂರ್ತಿ ಮೂಡುತ್ತದೆ ಎಂದರು.
ಸಾವಿತ್ರಿಬಾಯಿ ಫುಲೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ವನಿತಾ, ಕಾರ್ಯದರ್ಶಿ ಕುಸುಮಾ, ಗೌರವಾಧ್ಯಕ್ಷೆ ಡಾ.ರಾಧಾ ಕೆ.ಎಂ., ಖಜಾಂಚಿ ರಾಧಾಮಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.