ತಿಪಟೂರು: ಒಳಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ದಂಡೋರದಿಂದ ನಗರಸಭಾ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಬಿ.ಎಚ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ಹಾಗೂ ಶಿವಕುಮಾರ ಸ್ವಾಮಿಜಿ ವೃತ್ತದವರೆಗೂ ಅಂಬೇಡ್ಕರ್ ಭಾವಚಿತ್ರವಿರುವ ಬಾವುಟ ಹಿಡಿದು ಬೈಕ್ನಲ್ಲಿ ರ್ಯಾಲಿ ನಡೆಸಿದರು.
ಜಿ.ಪಂ ಮಾಜಿ ಸದಸ್ಯ ಕೊಪ್ಪಶಾಂತಪ್ಪ ಮಾತನಾಡಿ, ಶೋಷಿತ ಸಮುದಾಯಗಳು ಸರ್ಕಾರದ ಮೀಸಲಾತಿ ಸವಲತ್ತುಗಳನ್ನ ಪಡೆಯಬೇಕು ಎಂದರೆ ಒಳಮೀಸಲಾತಿ ಜಾರಿಯಾಗಬೇಕು. ಕಳೆದ ಮೂರು ದಶಕಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ನಿರಂತರವಾಗಿ ಹೋರಾಟ ಮಾಡುತ್ತಿವೆ ಎಂದರು.
ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಬಿ.ಕೃಷ್ಣಪ್ಪ ಅವರು ಹಚ್ಚಿದ ಒಳಮೀಸಲಾತಿ ಹೋರಾಟದ ಕಿಚ್ಚು ಸುಪ್ರೀಂಕೋರ್ಟ್ ಆದೇಶದಿಂದ ಫಲಕೊಡುವ ಕಾಲಬಂದಿದೆ ಎಂದರು.
ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕೆಳಮಟ್ಟದ ಸಮುದಾಯಗಳಿಗೆ ಸರ್ಕಾರದ ಮೀಸಲಾತಿ ಹಾಗೂ ಸವಲತ್ತು ಲಭಿಸುತ್ತಿರಲಿಲ್ಲ. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಶೋಷಿತ ಸಮುದಾಯಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು.
ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ಡಿಎಸ್ಎಸ್ ಸಂಚಾಲಕ ಟಿ.ಕೆ. ಕುಮಾರ್, ಗಾಂಧಿನಗರ ಬಸವರಾಜು, ಬಿಳಿಗೆರೆ ಚಂದ್ರಶೇಖರ್, ಯಗಚಿಕಟ್ಟೆ ರಾಘವೇಂದ್ರ, ಲಿಂಗದೇವರು, ಜಗದೀಶ್, ಅಶೋಕ್ ಗೌಡನಕಟ್ಟೆ, ಈಚನೂರು ಸೇಮಶೇಖರ್, ಕೊಪ್ಪ ಉದಯ್ಕುಮಾರ್, ಗ್ರಾಪಂ ಸದಸ್ಯ ಆನಂದ್ಕುಮಾರ್, ರಮೇಶ್, ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.