ADVERTISEMENT

ನೊಣವಿನಕೆರೆ ಪಿಎಂಶ್ರೀ ಶಾಲೆಗೆ ಉತ್ತಮ ಶಾಲೆ ಗರಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:32 IST
Last Updated 30 ಜುಲೈ 2025, 5:32 IST
ನೊಣವಿನಕೆರೆ ಪಿಎಂಶ್ರೀ ಶಾಲೆಗೆ ಉತ್ತಮ ಶಾಲೆ ಘೋಷಣೆ ಸಂಭ್ರಚಾರಣೆಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು
ನೊಣವಿನಕೆರೆ ಪಿಎಂಶ್ರೀ ಶಾಲೆಗೆ ಉತ್ತಮ ಶಾಲೆ ಘೋಷಣೆ ಸಂಭ್ರಚಾರಣೆಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು   

ತಿಪಟೂರು: ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯಡಿ ರಾಷ್ಟ್ರದಾದ್ಯಂತ ಜಿಲ್ಲೆಗೊಂದು ಉತ್ತಮ ಶಾಲೆ ಆಯ್ಕೆಯಲ್ಲಿ ತಾಲ್ಲೂಕಿನ ನೊಣವಿನಕೆರೆ ಪಿಎಂಶ್ರೀ ಶಾಲೆ ಉತ್ತಮ ಶಾಲೆಯೆಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳು ದೊಡ್ಡತೆರೆಯಲ್ಲಿ ಇದನ್ನು ವೀಕ್ಷಿಸಿದರು.

ಉಪನಿರ್ದೇಶಕರ ಕಚೇರಿ ಡಿವೈಪಿಸಿ ಸೌಭಾಗ್ಯಮ್ಮ, ಎಪಿಸಿ ಪ್ರಮೀಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಜಿ. ಹಾಗೂ ಅಕ್ಷರ ದಾಸೋಹ ನಿರ್ದೇಶಕ ಶಿವಶಂಕರ್, ಎಸ್‌ಡಿಎಂಸಿ ಉಪಾಧ್ಯಕ್ಷ ದೊಡ್ಡರಂಗಪ್ಪ ಹಾಗೂ ಶಾಲಾಭಿವೃದ್ದಿ ಸದಸ್ಯರು, ಪದವೀದರ ಮುಖ್ಯೋಪಾಧ್ಯಯ ಸುರೇಶ್, ಶಿಕ್ಷಕ ವೃಂದ ಭಾಗವಹಿಸಿದ್ದರು.

ಡಿವೈಎಸ್‌ಪಿ ಸೌಭಾಗ್ಯಮ್ಮ ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ಆಂಗ್ಲ ಭಾಷೆಯಲ್ಲಿ ಉತ್ತಮವಾಗಿ ಸಂವಹನ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದ್ದು, ಇಲ್ಲಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಪ್ರತಿಭೆ ಅನಾವರಣಗೊಳಿಸಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದಕ್ಕೆ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಪಿಸಿ ಪ್ರಮೀಳಾ ಮಾತನಾಡಿ, ಈ ಶಾಲೆಯಲ್ಲಿ 750 ವಿದ್ಯಾರ್ಥಿಗಳಿದ್ದರೂ ಇಲ್ಲಿಯ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿ ಮಕ್ಕಳಲ್ಲಿ ಉತ್ತಮ ಕಲಿಕೆಯಲ್ಲಿ ತೊಡಗಿದ್ದಾರೆ. ಈ ಶಾಲೆ ಜಿಲ್ಲೆಯ ಉತ್ತಮ ಪಿಎಂಶ್ರೀ ಶಾಲೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಈ ಶಾಲೆಯ ಪ್ರಗತಿಯ ಸಂಕೇತ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಜಿ. ಮಾತನಾಡಿ, ಕಳೆದ 15 ವರ್ಷಗಳಿಂದ ನಿರಂತರವಾಗಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಅಳವಡಿಸಿಕೊಂಡಿರುವ ಹಲವು ಸೃಜನಾತ್ಮಕ ಚಟುವಟಿಕೆಗಳು ಶಾಲೆಯನ್ನು ಜಿಲ್ಲಾಮಟ್ಟದ ಉತ್ತಮ ಶಾಲೆ ಎಂದು ಆಯ್ಕೆ ಮಾಡುವುದಕ್ಕೆ ಮೂಲ ಕಾರಣಗಳಾಗಿವೆ ಎಂದು ಹೇಳಿದರು.

ಪದವೀಧರ ಮುಖ್ಯಶಿಕ್ಷಕ ಸುರೇಶ್ ಮಾತನಾಡಿ, ‘ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮಕ್ಕಳ ಏಳಿಗೆಯೇ ನಮ್ಮ ಧ್ಯೇಯ’ ಎಂದರು.

ವಿದ್ಯಾರ್ಥಿಗಳ ಹತ್ತು ಹಲವು ಸ್ಪರ್ಧಾತ್ಮಕ ಚಟುವಟಿಕೆಗಳ ಅನಾವರಣ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.