ಮಧುಗಿರಿ: ರೇಷ್ಮೆ ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಹೆಚ್ಚು ಇಳುವರಿ ಪಡೆಯಬಹುದು ಎಂದು ರೇಷ್ಮೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಲಕ್ಷ್ಮೀನರಸಯ್ಯ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ರೇಷ್ಮೆ ಇಲಾಖೆ ಕೇಂದ್ರ ಮತ್ತು ರೇಷ್ಮೆ ಮಂಡಳಿಯಿಂದ ಮಂಗಳವಾರ ನಡೆದ ತಾಲ್ಲೂಕು ರೇಷ್ಮೆ ಬೆಳೆಗಾರರ ಕಾರ್ಯಾಗಾರ ಹಾಗೂ ‘ನನ್ನ ರೇಷ್ಮೆ, ನನ್ನ ಹೆಮ್ಮೆ’ ಅಭಿಯಾನದಲ್ಲಿ ಮಾತನಾಡಿದರು.
ತಾಲ್ಲೂಕಿನ ರೈತರು ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದ ರೈತರು ಕೂಡ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದರು.
ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ. ದಯಾನಂದ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ. ರೇಷ್ಮೆ ಕೃಷಿ ಆಧಾರಿತ ಗುಡಿ ಕೈಗಾರಿಕೆ ರೇಷ್ಮೆ ಕೃಷಿ ಉದ್ಯೋಗವನು ಸೃಷ್ಟಿಸುತ್ತದೆ. ಎಕರೆಗೆ ₹1.66 ಲಕ್ಷ ಲಾಭ ಬರುತ್ತದೆ. ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕದ ಭಾಗ ಶೇ 41 ರಷ್ಟು ಇದೆ ಎಂದರು.
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಸೊಪ್ಪಿನ ಗುಣಮಟ್ಟ ಉತ್ತಮ ವಾತಾವರಣ ತಂತ್ರಜ್ಞಾನ ನಿರ್ವಹಣೆ ಅವಶ್ಯಕತೆ. ಗೊಬ್ಬರವನ್ನು ಮಿತವಾಗಿ ಬಳಸಿ ಜೈವಿಕ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು. ಹೆಣ್ಣು ಮಕ್ಕಳು ಹೆಚ್ಚಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶಿರಾ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಂಗನಾಥ್ ಮಾತನಾಡಿ, ಹೊಸ ತಳಿ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವರ್ಷಕ್ಕೆ 5ರಿಂದ 6 ಬೆಳೆ ಬೆಳೆಯಬಹುದು ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ಮಾತನಾಡಿದರು. ತಾಲ್ಲೂಕಿನ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಮಾತನಾಡಿದರು. ಸಿಬ್ಬಂದಿ ರಮೇಶ್, ನಾರಾಯಣಪ್ಪ, ಶ್ರೀಕಾಂತ್, ನಳಿನ, ನಿರ್ಮಲ, ಪುಟ್ಟಮ್ಮ, ಮಾರಮ್ಮ, ಲಕ್ಷ್ಮಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.