ತುಮಕೂರು: ಮಕ್ಕಳಲ್ಲಿ ಈಗಿನಿಂದಲೇ ಉದ್ಯಮಶೀಲತಾ ಮನಸ್ಥಿತಿ ಬೆಳೆಸಿದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಸಲಹೆ ನೀಡಿದರು.
ಚಿಕ್ಕನಾಯಕನಹಳ್ಳಿಯ ಸ್ತ್ರೀಶಕ್ತಿ ಭವನದಲ್ಲಿ ನಡೆದ ಉದ್ಯಮ್ ಶಿಕ್ಷ ಬೇಸಿಗೆ ಶಿಬಿರದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರಿನ ಉದ್ಯಮ್ ಲರ್ನಿಂಗ್ ಫೌಂಡೇಷನ್ ಸಹಯೋಗದಲ್ಲಿ ಏ.4ರಿಂದ 19ರವರೆಗೆ ಹಮ್ಮಿಕೊಂಡಿದ್ದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಉದ್ಯಮವನ್ನು ಹೇಗೆ ಪ್ರಾರಂಭಿಸಬೇಕು, ಗ್ರಾಹಕರೊಂದಿಗೆ ವ್ಯವಹರಿಸುವ, ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಗಿದೆ. ಈ ಶಿಬಿರವು ತಮ್ಮ ಮುಂದಿನ ಜೀವನದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗಲಿದೆ ಎಂದರು.
ಪ್ರೊ.ರಂಗಾರೆಡ್ಡಿ ಮಾತನಾಡಿ, ‘ಯಳನಾಡು, ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಉದ್ಯಮ್ ಶಿಕ್ಷ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಮಕ್ಕಳು ಉದ್ಯಮಶೀಲತೆಯ ಮನಸ್ಥಿತಿ ಬೆಳೆಸಿಕೊಳ್ಳಲು ಹಲವು ಹೊಸ ಮತ್ತು ಸವಾಲಿನ ಕೆಲಸಗಳಲ್ಲಿ ತೊಡಗಿಸಿಕೊಂಡು ಶಿಬಿರ ಯಶಸ್ವಿಗೊಳಿಸಿದ್ದಾರೆ’ ಎಂದು ತಿಳಿಸಿದರು.
ಉದ್ಯಮ್ ಲರ್ನಿಂಗ್ ಫೌಂಡೇಷನ್ ಸಂಸ್ಥಾಪಕ ಮೇಕಿನ್ ಮಹೇಶ್ವರಿ ಮಾತನಾಡಿ, ‘ಮಕ್ಕಳಲ್ಲಿ ಉದ್ಯಮಶೀಲತೆಯ ಮನಸ್ಥಿತಿ ಬೆಳೆಸುವಲ್ಲಿ ಫೌಂಡೇಷನ್ನಿಂದ ಕಳೆದ ಎರಡು ವರ್ಷಗಳಲ್ಲಿ 1500 ಮಕ್ಕಳೊಂದಿಗೆ ನೇರವಾಗಿ ಕೆಲಸ ಮಾಡಿದ್ದೇವೆ’ ಎಂದು ಹೇಳಿದರು.
ಶಿಬಿರದಲ್ಲಿ ಶಿಕ್ಷಕರ ನೆರವಿನೊಂದಿಗೆ ಮಕ್ಕಳಿಂದ ಆಹಾರ ಪದಾರ್ಥ ತಯಾರಿಸಿ ಮಾರಾಟ ಮಾಡುವಂತೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ಮಕ್ಕಳು ಮಜ್ಜಿಗೆ, ಗುಲಾಬ್ ಜಾಮೂನ್ ತಯಾರಿಸಿ ಶಾಲೆಯ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡಿದರು.
ಮಕ್ಕಳ, ಪೋಷಕರ, ಶಿಕ್ಷಕರ ಮತ್ತು ತರಬೇತುದಾರರ ಅನುಭವಗಳನ್ನು ಒಳಗೊಂಡ ‘ಇದು, ನಿಮ್ಮ ಕಥೆ’ ಎಂಬ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. 80ಕ್ಕೂ ಹೆಚ್ಚು ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಫೌಂಡೇಷನ್ ಪ್ರಧಾನ ಕಾರ್ಯಕರ್ತೆ ಸುಪ್ರಿಯಾ ಪಂಚಾಂಗಮ್, ತುಮಕೂರು ಡಿಡಿಪಿಐ ಎಂ.ಆರ್.ಕಾಮಾಕ್ಷಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.