ADVERTISEMENT

ಶಿರಾ: ವಕೀಲರು ಬಿಜೆಪಿ ಸೇರಿದ್ದು ನಿಜ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 3:06 IST
Last Updated 7 ಅಕ್ಟೋಬರ್ 2020, 3:06 IST
ಕಾಂಗ್ರೆಸ್‌ ಸೇರಿರುವ ವಕೀಲರು
ಕಾಂಗ್ರೆಸ್‌ ಸೇರಿರುವ ವಕೀಲರು   

ಶಿರಾ: ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ವಕೀಲರು ಅವರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸೇರಿದ್ದಾರೆ. ಯಾವುದೇ ಅಸೆ, ಅಮಿಷಗಳಿಗೆ ಬಲಿಯಾಗಿಲ್ಲ ಎಂದು ವಕೀಲ ಆರ್.ಸರ್ವೇಶ್ ಹೇಳಿದರು.

ವಕೀಲಎಚ್.ಗುರುಮೂರ್ತಿ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರಿನ ಕೆಪಿಸಿಸಿ ಭವನದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲು ವಕೀಲರು ತೆರಳಿದ್ದರೇ, ಹೊರತು ಯಾವುದೇ ಸಾಲ ಪಡೆಯಲು ಅಲ್ಲ. ವಕೀಲರು ಸಾಲ ಪಡೆಯಲು ಬೆಂಗಳೂರಿಗೆ ಹೋಗುವ ಅಗತ್ಯ ಇಲ್ಲ ನಗರದಲ್ಲಿಯೇ ಬೇಕಾದಷ್ಟು ಬ್ಯಾಂಕುಗಳಿವೆ ಎಂದರು.

ವಕೀಲರ ಸಂಘದ ಅಧ್ಯಕ್ಷರು ಅಧಿಕಾರಾವಧಿ ಮುಕ್ತಾಯವಾಗಿದ್ದರೂ ತಾವೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಎಂದು ಸಿ.ಎಚ್.ಜಗದೀಶ್ ಹಾಗೂ ಸಣ್ಣಕರೇಗೌಡ ಸಂಘವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಕೀಲರು ರಾಜಕೀಯ ಪಕ್ಷಗಳಿಗೆ ಸೇರಲು ಸಂಘದ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದರು.

ADVERTISEMENT

ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿದ್ದವರು ವಕೀಲರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ವಕೀಲ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇವರು ತಕ್ಷಣ ಬಹಿರಂಗವಾಗಿ ವಕೀಲರ ಕ್ಷಮೆಯಾಚಿಸಬೇಕು ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಜನರ ಒಲವಿರುವುದರಿಂದ ಹತಾಶರಾಗಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಜೊತೆ ವಕೀಲರ ಬಗ್ಗೆ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರು ಬಿಜೆಪಿ ಸೇರಲು ಮುಂದಾಗಿದ್ದು, ವಕೀಲರ ಬೆಂಬಲ ದೊರೆಯದ ಕಾರಣ ಈ ರೀತಿ ಮಾತನಾಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರು ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಅವರ ಜತೆ ಚರ್ಚಿಸಲು ಬೆಂಗಳೂರಿಗೆ ತೆರಳಿದ್ದು, ಅವರು ಸಕಾರಾತ್ಮಕವಾಗಿ ಸ್ವಂದಿಸಿದ ಕಾರಣ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದರು.

ವಕೀಲರಾದ ಜಿ.ರಘು, ನಾಗರಾಜು, ಸಿದ್ದರಾಜು, ಈರಣ್ಣ, ಮಂಗಳಮ್ಮ, ವಿಶ್ವೇಶ್ವರಯ್ಯ, ವೈ.ಆರ್.ರವಿ, ಪುರುಷೋತ್ತಮ್, ಹೊನ್ನೇಶ್ ಗೌಡ, ವೆಂಕಟೇಶ್, ಜಗಧೀಶ್, ರಾಜು, ಮಂಗಳಮ್ಮ, ಶೋಭಾರಾಣಿ, ರಾಘವೇಂದ್ರ, ಪರಮೇಶ್, ಹನುಮಂತರಾಯಪ್ಪ, ಯತೀಶ್, ನರಸಿಂಹಮೂರ್ತಿ, ರಾಮಚಂದ್ರಪ್ಪ, ರಮೇಶ್, ರಂಗನಾಥ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.