ತುಮಕೂರಿನಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಸ್.ಎಲ್.ಭೈರಪ್ಪ, ಮೊಗಳ್ಳಿ ಗಣೇಶ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ತುಮಕೂರು: ಎಸ್.ಎಲ್.ಭೈರಪ್ಪ ಸೃಜನಶೀಲ ಅನ್ವೇಷಕ. ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ಅದಕ್ಕೆ ಸೃಜನಶೀಲತೆ, ಕಥನದ ಸ್ಪರ್ಶ ನೀಡಿ ಕಾದಂಬರಿ ರಚಿಸುತ್ತಿದ್ದರು ಎಂದು ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಕರೀಗೌಡ ಬೀಚನಹಳ್ಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ಸಾಹಿತಿ ಎಸ್.ಎಲ್.ಭೈರಪ್ಪ, ಕಥೆಗಾರ ಮೊಗಳ್ಳಿ ಗಣೇಶ್ ನುಡಿ ನಮನ, ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಗಳ್ಳಿ ಗಣೇಶ್ ಸಣ್ಣಕಥೆಗಳನ್ನು ಬರೆದು ಪ್ರಸಿದ್ಧರಾಗಿದ್ದರು. ಇಬ್ಬರು ಸಾಹಿತ್ಯ ದಿಗ್ಗಜರ ಅಗಲಿಕೆಯಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಲೇಖಕ ಎಸ್.ಪಿ.ಪದ್ಮಪ್ರಸಾದ್, ‘ಭೈರಪ್ಪನವರ ಸಾಹಿತ್ಯ ನವೋದಯ, ಬಂಡಾಯ ಅಥವಾ ಇತರೇ ಸಮಕಾಲೀನ ಸಾಹಿತ್ಯದ ಯಾವುದೇ ನಿರ್ದಿಷ್ಟ ಪ್ರಕಾರಕ್ಕೆ ಸೇರುವುದಿಲ್ಲ. ಅನೇಕ ಕೃತಿ, ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಹಲವು ಮುದ್ರಣ ಕಾಣುತ್ತಿದ್ದವು. ಅವು ಸಾಹಿತ್ಯ ವಲಯದಲ್ಲಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗುತ್ತಿದ್ದವು. ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯದಿರುವುದು ವಿಷಾದಕರ ಸಂಗತಿ’ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಭೈರಪ್ಪನವರು ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಅವರ ಭಾಷಣವೇ ಹಲವು ವಿವಾದ ಸೃಷ್ಟಿಸಿತ್ತು. ಬಲಪಂಥೀಯ ವಿಚಾರಧಾರೆಯ ಪ್ರತಿಪಾದಕರಾಗಿದ್ದ ಅವರ ಭಾಷಣವನ್ನು ಎಡಪಂಥೀಯರೆಲ್ಲರೂ ಟೀಕಿಸಿದ್ದರು’ ಎಂದು ಹೇಳಿದರು.
ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ಲೇಖಕಿ ಎಂ.ಸಿ.ಲಲಿತಾ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಪರಿಷತ್ತಿನ ಪದಾಧಿಕಾರಿಗಳಾದ ಎಂ.ಎಚ್.ನಾಗರಾಜ್, ಡಿ.ಎನ್.ಯೋಗೀಶ್ವರಪ್ಪ, ಜಿ.ಎಚ್.ಮಹದೇವಪ್ಪ, ಚಿಕ್ಕಬೆಳ್ಳಾವಿ ಶಿವಕುಮಾರ್, ಪ್ರೊ.ಕಮಲಾ ನರಸಿಂಹ, ಎಲೆರಾಂಪುರ ರುದ್ರಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.