ತುಮಕೂರು: ಶ್ರೀಲಂಕಾದಲ್ಲಿ ಉಗ್ರವಾದಿಗಳು ನಡೆಸಿದ ದಾಳಿ ಹೇಯವಾಗಿದ್ದು, ಬಲಿಯಾದ ಅಮಾಯಕರಲ್ಲಿ ನಮ್ಮ ರಾಜ್ಯದವರೂ ಇದ್ದರು. ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಾಂತ್ವನ ಹೇಳಿ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀಲಂಕಾದಲ್ಲಿ ಇಸ್ಲಾಮ್ ಟೆರರಿಸ್ಟ್ ನಡೆಸಿದ ದುಷ್ಕೃತ್ಯದಲ್ಲಿ ಬಲಿಯಾದವರನ್ನು ಕಂಡರೆ ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಾಗೆ ಆಗುತ್ತದೆ. ಯಾವ್ಯಾವುದೋ ದುರುದ್ದೇಶಕ್ಕೆ ಅಮಾಯಕರನ್ನು ಬಲಿ ಪಡೆಯುತ್ತಿರುವುದನ್ನು ಜಾತಿ, ಮತ, ಪಂಥ ಬಿಟ್ಟು ಖಂಡಿಸಬೇಕಾಗಿದೆ. ಉಗ್ರವಾದಿ ಚಟುವಟಿಕೆಗಳು, ಸಮಾಜ ಘಾತುಕ ಶಕ್ತಿಗಳು ಎಲ್ಲಿಯೇ ತಲೆ ಎತ್ತುತ್ತಿದ್ದರೆ ಅಂತಹದ್ದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ದುಷ್ಕೃತ್ಯ ನಡೆಸುವವರನ್ನು ಹಿಡಿದು ಕೊಡಬೇಕು’ ಎಂದು ಹೇಳಿದರು.
‘ಜಗತ್ತಿನಲ್ಲಿ ಮನುಕುಲ ಒಟ್ಟಿಗೆ ಜೀವಿಸಬೇಕಾದರೆ ಉಗ್ರವಾದಿಗಳ ಸಂತತಿ ನಿರ್ನಾಮ ಆಗಬೇಕು. ಉಗ್ರವಾದಿಗಳು ಹೆಚ್ಚು ಇರುವುದು ಪಾಕಿಸ್ತಾನದಲ್ಲಿಯೇ. ಅಲ್ಲಿ ಉಗ್ರವಾದಿಗಳನ್ನು ಮಟ್ಟ ಹಾಕಬೇಕು. ನಮ್ಮ ದೇಶದಲ್ಲೂ ಇಂತಹವರ ನಿರ್ನಾಮ ಮಾಡುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವಾಗಿದೆ. ವಿಶೇಷವಾಗಿ ನಮ್ಮ ದೇಶದ ಮುಸ್ಲಿಮರು ಹೆಚ್ಚಿನ ಗಮನಹರಿಸಿ ಉಗ್ರವಾದಿಗಳನ್ನು ಹುಡುಕಿ ಹುಡುಕಿ ಹಿಡಿದುಕೊಡಬೇಕು’ ಎಂದು ಮನವಿ ಮಾಡಿದರು.
’ಈ ದೇಶದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಿ ಜೀವನ ನಡೆಸದೇ ಇದ್ದರೆ ಆಂತರಿಕ ಯುದ್ಧಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅದರಲ್ಲೂ ನಮ್ಮ ದೇಶದಲ್ಲಿ ಮೀರ್ ಸಾದಿಕ್ ಗಳೇ ಹೆಚ್ಚಾಗಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.