
ತುಮಕೂರು: ಶಿಕ್ಷಣ, ಸಂಶೋಧನೆ, ನವೋದ್ಯಮ ಮತ್ತು ಸಂಸ್ಕೃತಿಯ ಕೇಂದ್ರವಾಗಿ ರಾಜ್ಯ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಾಧನೆಯ ಹಿಂದೆ ಕನ್ನಡಿಗರ ದುಡಿಮೆ, ಸೃಜನಶೀಲತೆ, ಸಂಸ್ಕಾರ ಅಡಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ರಾಜು ಹೇಳಿದರು.
ನಗರದಲ್ಲಿ ಈಚೆಗೆ ಕುಂಚಶ್ರೀ ಮಹಿಳಾ ಬಳಗದಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ, ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಭಾಷೆ, ನಾಡು, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಸಾಗಿಸುವ ಹೊಣೆ ನಮ್ಮ ಮೇಲಿದೆ. ಭಾಷೆಯ ಬಗ್ಗೆ ಮಕ್ಕಳಿಗೂ ತಿಳಿಸಬೇಕು ಎಂದು ಸಲಹೆ ಮಾಡಿದರು.
ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಸಿ.ಲಲಿತಾ ಮಲ್ಲಪ್ಪ, ‘ಯೋಧರು ತಮ್ಮ ಬದುಕು ಬಿಟ್ಟು ದೇಶದ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ದೇಶದ ನಾಡು, ನುಡಿಗಾಗಿ ದುಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.
ನಿವೃತ್ತ ಯೋಧರಾದ ಮಹಾಲಿಂಗಯ್ಯ, ಬಿ.ಆರ್.ವಸಂತ್, ಕೃಷ್ಣಮೂರ್ತಿ, ರಮೇಶ್, ಶಿವರಾಜು ಅವರನ್ನು ಸನ್ಮಾನಿಸಲಾಯಿತು. ಪಶುಸಂಗೋಪನಾ ಇಲಾಖೆಯ ನಿವೃತ್ತಿ ಸಹಾಯಕ ನಿರ್ದೇಶಕಿ ಜಲಜಾಕ್ಷಿ ಪರಮೇಶ್ವರ, ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಧರ್, ಕುಂಚಶ್ರೀ ಮಹಿಳಾ ಬಳಗದ ಬಿಂದು ರಮೇಶ್, ಮಂಜುಳಾ ನಾಗರಾಜ್, ಸುನೀತಾ, ನೇತ್ರಾ ಗಿರೀಶ್, ಶೈಲಾ ಸುರೇಶ್, ಶಾರದಾ ನಾಗರಾಜು, ಮಂಜುಳಾ ರಾಮು, ಸುವರ್ಣಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.