ADVERTISEMENT

ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ

ಮುಖಂಡರು, ಕಾರ್ಯಕರ್ತರ ನಡುವೆ ವೈಮನಸ್ಸು: ಆರ್.ರಾಜೇಂದ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 1:30 IST
Last Updated 13 ಫೆಬ್ರುವರಿ 2021, 1:30 IST
ಯುವಕಾಂಗ್ರೆಸ್ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು
ಯುವಕಾಂಗ್ರೆಸ್ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು   

ತುಮಕೂರು: ಯುವ ಕಾಂಗ್ರೆಸ್ ಚುನಾವಣೆಯು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ವೈಮನಸ್ಸು ಮೂಡಲು ಕಾರಣವಾಗುತ್ತಿದೆ. ಚುನಾವಣೆ ಬದಲು ಅವಿರೋಧ ಆಯ್ಕೆ ಮಾಡಬೇಕು ಎಂದು ಯುವಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯುವಕಾಂಗ್ರೆಸ್ ಚುನಾವಣೆಗೆ ಜಿಲ್ಲೆಯಲ್ಲಿಯೇ 18ರಿಂದ 20 ಸಾವಿರ ಮತಗಳು ಇದ್ದವು. 8ರಿಂದ 10 ಸಾವಿರ ಮತಗಳು ತಿರಸ್ಕೃತವಾದವು. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಯುವಕಾಂಗ್ರೆಸ್ ಚುನಾವಣೆ ಬಗ್ಗೆ ಗೊಂದಲವಿದೆ’ ಎಂದು ಹೇಳಿದರು.

‘ರಾಜ್ಯಮಟ್ಟದಲ್ಲಿ ಮಹಮ್ಮದ್ ನಲಪಾಡ್ ಮತ್ತು ರಕ್ಷಾ ರಾಮಯ್ಯ ಆಯ್ಕೆಗೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದೆ. ಯಾರಾದರೂ ಒಬ್ಬರ ಪರವಾಗಿ ಕೆಲಸ ಮಾಡಿದರೆ ಮತ್ತೊಂದು ಬಣ ಅವರನ್ನು ವಿರೋಧಿ
ಗಳು ಎನ್ನುವ ರೀತಿಯಲ್ಲಿ ನೋಡುತ್ತದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಎದುರಾಳಿ ಪಕ್ಷಗಳ ವಿರುದ್ಧ ಹೋರಾಡ
ಬೇಕು. ಆದರೆ ಈ ಚುನಾವಣೆಗಳು ನಮ್ಮ ನಮ್ಮ ನಡುವೆಯೇ ಮನಸ್ತಾಪ, ಒಡಕಿಗೆ ಕಾರಣವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕಾರ್ಯಕರ್ತರ ನಡುವೆ ಒಡಕಿಗೆ ಯುವ ಕಾಂಗ್ರೆಸ್ ಚುನಾವಣೆಕಾರಣವಾಗುತ್ತಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಅನ್ಯ ಪಕ್ಷಗಳನ್ನು ಸೇರುತ್ತಿದ್ದಾರೆ. ಈ ವಿಚಾರವನ್ನು ಯುವಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಅವಿರೋಧ ಆಯ್ಕೆ ನಡೆಸಿ ಎಂದು ನಾನು ಕೋರಿದ್ದೇನೆ’ ಎಂದರು.

ಒಬ್ಬೊಬ್ಬ ಮುಖಂಡರು ಒಬ್ಬೊಬ್ಬ ಅಭ್ಯರ್ಥಿಗೆ ಸಹಕಾರ ನೀಡುತ್ತಾರೆ. ಈ ಕಾರಣದಿಂದ ಕಾರ್ಯಕರ್ತರು, ಮುಖಂಡರ ನಡುವೆ ಬೇಗುದಿ ಹೆಚ್ಚಿಸುತ್ತಿದೆ.ಫೆಬ್ರುವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ಯುವ ಕಾಂಗ್ರೆಸ್‌ನಿಂದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾಧ್ಯಕ್ಷರ ಬದಲಿಗೆ ಆಗ್ರಹ: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳದಿರುವುದು ಮತ್ತು ಪಕ್ಷದ ಕಚೇರಿಗೆ ಬೀಗ ಹಾಕಿದ್ದರ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಠಿ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕು. ಆಗ ಮಾತ್ರ ಪಕ್ಷ ಬೆಳೆಯುತ್ತದೆ ಎಂದು ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆ ವೇಳೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಬಂದರು.

ಆರ್.ರಾಮಕೃಷ್ಣ ಮಾತನಾಡಿ, ಯುವ ಕಾಂಗ್ರೆಸ್ ಪದಾಧಿಕಾರಿಗಳಿಂದ ಪಕ್ಷ ಸದೃಢವಾಗಿ ಬೆಳೆಯುತ್ತದೆ. ಇವರನ್ನು ಅಭಿನಂದಿಸುವೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಯುವ ಕಾಂಗ್ರೆಸ್‌ ಪದಾಧಿಕಾರಿಗಳಾದ ಆಕಾಶ್, ಮೋಹನ್, ವೆಂಕಟೇಶ್, ಪ್ರತಾಪ್, ಮಂಜುನಾಥ್ ಸ್ವಾಮಿ ಮತ್ತಿತರರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.