ಕುಣಿಗಲ್: ಸಾಮಾಜಿಕ ಭದ್ರತೆ ಯೋಜನೆ ಫಲಾನುಭವಿಗಳ ಅನುಕೂಲಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ವಿಶೇಷ ಕೌಂಟರ್ ಪ್ರಾರಂಭಿಸಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದ್ದಾರೆ.
ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸಂದ್ಯಾ ಸುರಕ್ಷಾ ಯೋಜನೆಯ ಸಹಾಯಧನ ಪಡೆಯಲು ಅಲೆಯುತ್ತಿದ್ದ ವೃದ್ಧೆ ಜಯಮ್ಮ ಅವರ ಸಮಸ್ಯೆಗೆ ಸ್ಪಂದಿಸಿದ ನಂತರ ಪ್ರತಿಕ್ರಿಯಿಸಿದರು.
ಸರ್ಕಾರಿ ಸಹಾಯಧನ ಪಡೆಯಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ಫಲಾನುಭವಿಗಳು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಅಂಚೆ ಕಚೇರಿ ಮೂಲಕ ಹಣ ತಡವಾಗಿ ತಲುಪುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇತ್ತೀಚೆಗೆ ಪೋಸ್ಟ್ ಮಾಸ್ಟರ್ಗಳ ಸಭೆ ನಡೆಸಿ ಅಂಚೆಕಚೇರಿಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾತೆ ತೆರೆದು ನೇರವಾಗಿ ಹಣ ವರ್ಗಾವಣೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಸಮಾಜಿಕ ಭದ್ರತೆ ಯೋಜನೆಯಲ್ಲಿ 55,277 ಫಲಾನುಭವಿಗಳಿದ್ದಾರೆ. ತಾಂತ್ರಿಕ ದೋಷಗಳಿಂದ ತಡೆಹಿಡಿಯಲಾಗಿದ್ದ 4,600 ದೋಷಗಳನ್ನು ಸರಿಪಡಲಾಗಿದೆ. ಇನ್ನೂ 728 ಫಲಾನುಭವಿಗಳ ಖಾತೆಯಲ್ಲಿ ತಾಂತ್ರಿಕ ದೋಷಗಳಿವೆ. ಇದೇ 30ರೊಳಗೆ ಸರಿಪಡಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.