ತುಮಕೂರು: ಶಿಷ್ಟಾಚಾರದ ನೆಪದಲ್ಲಿ ದಬ್ಬಾಳಿಕೆ ಅಸ್ತಿತ್ವದಲ್ಲಿದೆ. ಭ್ರಷ್ಟತೆಯಿಂದ ಕೂಡಿದ ಸಮಾಜದಲ್ಲಿ ಯುವ ಪೀಳಿಗೆ ಬದುಕುತ್ತಿರುವುದು ದುರಂತ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಆರ್.ಕಾವಲಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ವಿ.ವಿಯಲ್ಲಿ ಗುರುವಾರ ಇತಿಹಾಸ, ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಮಹಿಳಾ ಅಧ್ಯಯನ ಕೇಂದ್ರ ಮತ್ತು ಹಾಲಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣ ಮತ್ತು ಯುವ ಜನತೆ’ ಕುರಿತ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅಧಿಕಾರ, ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ದೇಶಿಸಬೇಕು. ಸಾಮಾನ್ಯರ ಮೇಲೆ ಪ್ರಯೋಗಿಸಬಾರದು. ಸ್ಥಾನ ಬದಲಾದಂತೆ ಪ್ರಬುದ್ಧರಾಗಿ, ಸಮಾಜದ ರಕ್ಷಣೆಗಾಗಿ ದುಡಿಯಬೇಕು, ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಬೇಕು. ಈಗಿನ ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಪ್ರಜ್ಞೆ ಇಲ್ಲದೆ ಅಪ್ರಬುದ್ಧರಾಗಿದ್ದಾರೆ. ನನ್ನ ಮನೆಯಷ್ಟೇ ಉದ್ಧಾರ ಆಗಬೇಕು ಎಂಬ ಪೋಷಕರ ಮನಸ್ಥಿತಿಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
‘ಧರ್ಮೋ ರಕ್ಷತಿ ರಕ್ಷಿತಃ’ ಎಂದರೆ ನಮ್ಮ ಕಾರ್ಯ ಸರಿಯಾಗಿ ಮಾಡಿದರೆ ಆ ಕಾರ್ಯವು ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಆಸೆ, ಆಶಯಗಳಿರಬೇಕು. ಇದರಿಂದ ರಾಷ್ಟ್ರ ರಕ್ಷಣೆ ಸಾಧ್ಯ. ಸಂಕುಚಿತ ಮನೋಭಾವದಿಂದ, ಆಲಸ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ತಾಳ್ಮೆ, ವಿಷಯಗಳ ಮೇಲಿನ ಪ್ರಭುತ್ವ, ಹಿಡಿತ ಅಗತ್ಯ ಎಂದು ಹೇಳಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಕೆಲವು ಸಮುದಾಯದ, ಕುಟುಂಬದ ಸಂಕುಚಿತ ಮನೋಭಾವದಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದು ವಿಷಾದಿಸಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕಿ ಪ್ರಿಯಾ ಠಾಕೂರ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಜ್ಯೋತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.