ತುಮಕೂರಿನಲ್ಲಿ ಶನಿವಾರ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ– ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ತುಮಕೂರು: ‘ಜಾತಿ ವ್ಯವಸ್ಥೆ ಸಮಾಜದ ಅತ್ಯಂತ ದೊಡ್ಡ ಪಿಡುಗು, ರೋಗ. ಈ ವ್ಯವಸ್ಥೆ ವಿನಾಶಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಗತ್ಯ’ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ– ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಯಾವ ಸಮುದಾಯ ಹಿಂದುಳಿದಿದೆ, ಜನರ ಸ್ಥಿತಿಗತಿ ಹೇಗಿದೆ ಎಂದು ತಿಳಿದರೆ ಮಾತ್ರ ಅವರಿಗೆ ಶಕ್ತಿ ತುಂಬಲು ಸಾಧ್ಯ. ವಿಶೇಷ ನೀತಿ ರಚನೆ, ಕಾರ್ಯಕ್ರಮ ರೂಪಿಸಲು, ಮೀಸಲಾತಿ ಹೆಚ್ಚಿಸಲು ಅನುಕೂಲವಾಗುತ್ತದೆ. ಇದಕ್ಕಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಸಮಾಜ ಒಡೆಯುತ್ತದೆ, ಜಾತಿ ಮಧ್ಯೆ ದ್ವೇಷ ಮೂಡಿಸುತ್ತದೆ ಎಂಬ ವಾದ ಸರಿಯಲ್ಲ. ಇದಕ್ಕೆ ಯಾರೂ ಸೊಪ್ಪು ಹಾಕಬೇಕಾಗಿಲ್ಲ ಎಂದರು.
ಜಾತಿ ವ್ಯವಸ್ಥೆ ಹೋಗಲಾಡಿಸಲು ಬಹಳಷ್ಟು ಪ್ರಯತ್ನಗಳು ನಡೆದವು. ಸಂತರು, ದಾಸರು, ಶರಣರು, ಅಂಬೇಡ್ಕರ್ ಸಹಿತ ಜಾತಿ ವಿನಾಶಕ್ಕೆ ಹೋರಾಡಿದರು. ಆದರೆ, ಜಾತಿ ಮತ್ತಷ್ಟು ಬಲಗೊಳ್ಳುತ್ತಾ ಹೋಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ ನಂತರ ಶೂದ್ರರು ಆಸ್ತಿ, ಅಂತಸ್ತು, ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಲು ಸಾಧ್ಯವಾಯಿತು. ವಿಶೇಷ ಸವಲತ್ತು ಕೊಡದಿದ್ದರೆ ಜಾತಿ ವ್ಯವಸ್ಥೆ ವಿನಾಶ ಸಾಧ್ಯವಿಲ್ಲ ಎಂದು ತಿಳಿಸಿದರು.
ಜಾಗೃತ ಕರ್ನಾಟಕ ಮುಖಂಡ ಡಾ.ಎಚ್.ವಿ.ವಾಸು, ‘ಸಮೀಕ್ಷೆಯಿಂದ ಮೀಸಲಾತಿಗೆ ತೊಂದರೆಯಾಗುತ್ತದೆ ಎಂದು ಕೆಲ ಸಮುದಾಯಗಳು ಆತಂಕದಲ್ಲಿವೆ. ಹಿಂದುಳಿದ ವರ್ಗಗಳಿಗೆ ರಾಜಕೀಯ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಹಂಚಿಕೆ ಮಾಡಲು ಸಮೀಕ್ಷೆ ನಡೆಯುತ್ತಿದೆ ಎಂದೂ ಕೆಲವರು ಭಾವಿಸಿದ್ದಾರೆ. ಇದು ಬಹಳ ದುರದೃಷ್ಟಕರ. ಜನರಲ್ಲಿ ಮೀಸಲಾತಿ ಕುರಿತು ಬಹಳ ದೊಡ್ಡ ತಪ್ಪು ಕಲ್ಪನೆ ಇದೆ’ ಎಂದರು.
ಮುಖಂಡರಾದ ಡಿ.ಟಿ.ವೆಂಕಟೇಶ್, ಜೆ.ಕುಮಾರ್, ಹೆತ್ತೇನಹಳ್ಳಿ ಮಂಜುನಾಥ್, ಧನಿಯಾಕುಮಾರ್, ಟೂಡಾ ಶಶಿಧರ್, ಟಿ.ಎನ್.ಮಧುಕರ್, ಮೊಹ್ಮದ್ ಜಿಯಾವುಲ್ಲಾ, ಜೆ.ಕೆ.ಜಯಲಕ್ಷ್ಮಿ, ಮೈಲಪ್ಪ, ಟಿ.ಆರ್.ಸುರೇಶ್, ಆದಂ ಖಾನ್ ಮೊದಲಾದವರು ಪಾಲ್ಗೊಂಡಿದ್ದರು.
ಜೀವಪರ ಸಮೀಕ್ಷೆ ಇದು ಕೇವಲ ಅಂಕಿ–ಅಂಶಗಳ ಸಮೀಕ್ಷೆಯಲ್ಲ. ದುರ್ಬಲತೆ ಮೀರಿ ಬಲ ಪಡೆಯುವ ಉದ್ದೇಶ ಹೊಂದಿದ ಜೀವಪರ ಸಮೀಕ್ಷೆ. ಸಮಾನತೆ ಬಯಸುವ ಮಾನವೀಯ ಮನಸ್ಸುಗಳು ಇದರ ಪರ ಇರಬೇಕು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಎಲ್ಲರು ಶ್ರಮ ಪಡಬೇಕು. ಬಾ.ಹ.ರಮಾಕುಮಾರಿ ಲೇಖಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.